ಬೆಂಗಳೂರು: ‘ಗ್ಲಾಕೋಮಾ ಕಾಯಿಲೆಯು ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ನರಗಳಿಗೆ ಹಾನಿ ಮಾಡುತ್ತದೆ. ಆರಂಭಿಕ ಹಂತದಲ್ಲೇ ತಪಾಸಣೆ ನಡೆಸಿ, ಚಿಕಿತ್ಸೆ ಪಡೆದುಕೊಂಡಲ್ಲಿ ಅಂಧತ್ವ ತಡೆಯಲು ಸಾಧ್ಯ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಲಾಖೆಯು ಹಮ್ಮಿಕೊಂಡಿರುವ ವಿಶ್ವ ಗ್ಲಾಕೋಮಾ ಸಪ್ತಾಹಕ್ಕೆ ಭಾನುವಾರ ಚಾಲನೆ ದೊರೆತಿದ್ದು, ಇದೇ 12ರವರೆಗೆ ನಡೆಯಲಿದೆ. ‘ಈ ಕಾಯಿಲೆಗೆ ಒಳಗಾದವರಿಗೆ ಮಾಹಿತಿಯನ್ನು ದೃಷ್ಟಿಯಿಂದ ಮಿದುಳಿಗೆ ಸಾಗಿಸುವ ಹಂತದಲ್ಲಿನ ನರಗಳಿಗೆ ಹಾನಿ ಆಗುತ್ತದೆ.ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಉಚಿತವಾಗಿ ಕಣ್ಣಿನ ತಪಾಸಣೆಗಳನ್ನು ನಡೆಸಲಾಗುತ್ತಿದೆ’ ಎಂದು ಇಲಾಖೆ ಹೇಳಿದೆ.
‘ರೋಗ ಲಕ್ಷಣಗಳಿಲ್ಲದೆ ದೃಷ್ಟಿಯನ್ನು ಹಾನಿಗೊಳಿಸುವ ಕಾಯಿಲೆಗ್ಲಾಕೋಮಾ. 40 ವಯಸ್ಸಿನ ನಂತರ ಪ್ರತಿಯೊಬ್ಬರು ವರ್ಷಕ್ಕೊಮ್ಮೆ ಕಣ್ಣಿನ ಒತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ಮಧುಮೇಹ, ರಕ್ತದೊತ್ತಡ ಹಾಗೂ ಸಮೀಪ ದೃಷ್ಟಿದೋಷವಿರುವವರಲ್ಲಿಗ್ಲಾಕೋಮಾಆಗುವ ಸಂಭವ ಹೆಚ್ಚಾಗಿರುತ್ತದೆ. ಪದೇ ಪದೇ ಕನ್ನಡಕದ ಸಂಖ್ಯೆ ಬದಲಾಯಿಸಬೇಕಾದ್ದಲ್ಲಿ ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗ್ಲಾಕೋಮಾದಲ್ಲಿ ನೇರ ದೃಷ್ಟಿಯು ಸರಿಯಾಗಿದ್ದರೂ ದೃಷ್ಟಿ ವಲಯವು ಕುಗ್ಗುತ್ತಾ ಹೋಗುತ್ತದೆ’ ಎಂದು ತಿಳಿಸಿದೆ.
‘ಕುಟುಂಬದ ಪೋಷಕರು ಗ್ಲಾಕೋಮಾದಿಂದ ಬಳಲುತ್ತಿದ್ದರೆ ಇತರ ಸದಸ್ಯರು ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಶಾಶ್ವತ ಅಂಧತ್ವ ಉಂಟಾಗಬಹುದು. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ’ ಎಂದು ಸಲಹೆ ನೀಡಿದೆ.
‘ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 104 ಸಂಪರ್ಕಿಸಬಹುದು’ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.