ADVERTISEMENT

ಜನನಾಯಕ ಸರ್ಟಿಫಿಕೇಟ್ ಅಗತ್ಯವಿಲ್ಲ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 17:24 IST
Last Updated 16 ಏಪ್ರಿಲ್ 2019, 17:24 IST
   

ಚಳ್ಳಕೆರೆ: ನಾನೊಬ್ಬ ಜನನಾಯಕ ಎಂಬ ಬಿರುದನ್ನು ರಾಜ್ಯದ ಜನ ಈಗಾಗಲೇ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಂದ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು.

‘ಯಡಿಯೂರಪ್ಪ ಏನು ನಾಯಕರಾ’ಎಂಬ ಸಿದ್ದರಾಮಯ್ಯರವರ ಪ್ರಶ್ನೆಗೆ ಚಳ್ಳಕೆರೆಯಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಬಿಜೆಪಿಗೆ ಅಧಿಕಾರ ತಪ್ಪಿಸಬೇಕು ಎಂಬ ದುರುದ್ದೇಶದಿಂದ ವೀರಶೈವ ಸಮಾಜವನ್ನು ಒಡೆದು ಇಬ್ಭಾಗ ಮಾಡಲು ಕಾಂಗ್ರೆಸ್ ಪ್ರಯತ್ನಿಸಿತು. ಸೋನಿಯಾ ಗಾಂಧಿಯವರ ಸೂಚನೆಯ ಮೇರೆಗೆ ಈ ಷಡ್ಯಂತ್ರ ರೂಪಿಸಲಾಗಿತ್ತು ಎಂಬುವುದನ್ನು ಗೃಹ ಸಚಿವ ಎಂ.ಬಿ.ಪಾಟೀಲ್‍ರವರು ಈಗಾಗಲೇ ಒಪ್ಪಿಕೊಂಡಿರುವುದು ರಾಜ್ಯದ ಜನತೆಗೆ ಗೊತ್ತಿದೆ ಎಂದರು.

ADVERTISEMENT

ಮೋದಿ ವಿರುದ್ದ ಮಾತನಾಡಿದ ಕಾಂಗ್ರೆಸ್ ರಾಹುಲ್‌ ಗಾಂಧಿರವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ರಾಜಕಾರಣದ ಅನುಭವ ಇಲ್ಲದ ಹಸುಗೂಸು ಅವರು ಎಂದು ವ್ಯಂಗ್ಯ ಮಾಡಿದರು.

ಮಂಡ್ಯದ ಮತದಾರರಿಗೆ ₹ 200ರ ಬದಲು ₹ 2 ಕೋಟಿ ಹಂಚಿದರೂ ಜೆಡಿಎಸ್ ಗೆಲ್ಲಲು ಸಾಧ್ಯವಿಲ್ಲ. ಹಣದ ಹಂಚಿಕೆ ತಡೆಯಲು ಚುನಾವಣಾ ಆಯೋಗ ನಿಗಾ ಇಟ್ಟಿದೆ ಎಂದು ಹೇಳಿದರು.

ನಿರೀಕ್ಷೆಗೂ ಮೀರಿ ಬಿಜೆಪಿಗೆ ಬೆಂಬಲ ಸಿಗುತ್ತಿರುವ ಕಾರಣ ದೇಶದಲ್ಲಿ ಎಲ್ಲೆಡೆ ಮೋದಿ ಅಲೆ ಸೃಷ್ಟಿಯಾಗಿದೆ. ಇದರಿಂದಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎ.ನಾರಾಯಣಸ್ವಾಮಿ ಸೇರಿ ರಾಜ್ಯದ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸವಿದೆ. ದೇಶದಲ್ಲಿ 300ಕ್ಕೂ ಸ್ಥಾನಗಳನ್ನು ಗೆದ್ದು, ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.