ADVERTISEMENT

ರಂಗದಲ್ಲೇ ಕುಸಿದು ಯಕ್ಷಗಾನ ಕಲಾವಿದ ನಿಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 4:43 IST
Last Updated 11 ಮಾರ್ಚ್ 2019, 4:43 IST
   

ಉಡುಪಿ: ಬೈಂದೂರು ತಾಲ್ಲೂಕಿನ ಯಳಜಿತ ಗ್ರಾಮದ ಜೋಗಿಜಡ್ಡು ಎಂಬಲ್ಲಿ ಭಾನುವಾರ ರಾತ್ರಿ ಯಕ್ಷಗಾನ ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ಖ್ಯಾತ ಯಕ್ಷಗಾನ ಕಲಾವಿದ ಹುಡುಗೋಡು ಚಂದ್ರಹಾಸ (52) ರಂಗಸ್ಥಳದಲ್ಲಿಯೇ ಮೃತಪಟ್ಟರು.

ಕಲಾಧರ ಯಕ್ಷಗಾನ ಬಳಗ ಜಲವಳ್ಳಿ, ಈ ಮೇಳದ ವತಿಯಿಂದ ನಡೆಯುತ್ತಿದ್ದ ಯಕ್ಷಗಾನದಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸಿ ಕುಣಿಯುತ್ತಿದ್ದಾಗ ರಂಗದಲ್ಲಿ ಹುಡುಗೋಡು ಚಂದ್ರಹಾಸ ಅವರು ಕುಸಿದು ಬಿದ್ದರು.

ಚಂದ್ರಹಾಸ ಅವರು ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಕಲಾವಿದರು. ಭೀಷ್ಮವಿಜಯದ ಸಾಲ್ವನ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿತ್ತು. ಭಾನುವಾರ ಕೂಡ ಅವರು ಭೀಷ್ಮ ವಿಜಯ ಪ್ರಸಂಗದಲ್ಲಿ ಸಾಲ್ವನ ಪಾತ್ರ ನಿರ್ವಹಿಸುತ್ತಿದ್ದರು. ಸಾಲ್ವ ಹಾಗೂ ಭೀಷ್ಮನ ಸಂಭಾಷಣೆಯ ಮಧ್ಯೆ ಕುಸಿದು ಬಿದ್ದರು.

ADVERTISEMENT

ಚಂದ್ರಹಾಸ ಹುಡಗೋಡ್‌ ಫೇಸ್‌ಬುಕ್‌ ಖಾತೆಯಿಂದ ಪ್ರಸಂಗ ಲೈವ್‌ ಮಾಡಲಾಗುತ್ತಿತ್ತು. ಚಂದ್ರಹಾಸ ಅವರು ಹೊನ್ನಾವರ ಸಮೀಪದ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು.

ಹೃದಯಾಘಾತದಿಂದ ರಂಗದ ಮೇಲೆಯೇ ಕುಸಿದ ಅವರನ್ನು ತಕ್ಷಣವೇ ಬೈಂದೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಂದ್ರಹಾಸ ಅವರ‍ಪುತ್ರ ಪ್ರದೀಪ್‌ ಸಹ ಪ್ರಸಂಗದಲ್ಲಿ ಭಾಗಿಯಾಗಿದ್ದರು. ಇಡೀ ರಾತ್ರಿಯ ಪ್ರದರ್ಶನವನ್ನು ರದ್ದುಪಡಿಸಲಾಯಿತು.

ಹುಡುಗೋಡು ಚಂದ್ರಹಾಸ ಅವರು ಬಡಗುತಿಟ್ಟಿನ ಖ್ಯಾತ ಡೇರೆ ಮೇಳಗಳಾದ ಪೆರ್ಡೂರು, ಸಾಲಿಗ್ರಾಮ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಕಳೆದ 3 ವರ್ಷಗಳಿಂದ ಕೇವಲ ಅತಿಥಿ ಕಲಾವಿದರಾಗಿ ಮಾತ್ರ ಭಾಗವಹಿಸುತ್ತಿದ್ದರು. ಯಕ್ಷಗಾನ ಪ್ರಸಂಗಗಳಲ್ಲಿ ಖಳನ ಪಾತ್ರ ನಿರ್ವಹಿಸುತ್ತಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.