ಉಡುಪಿ: ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಕಾಂಚನ್ (70) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.
ಜಿಲ್ಲೆಯ ಮಣೂರಿನವರಾದ ಲಕ್ಷ್ಮಣ ಕಾಂಚನ್ 15ನೇ ವಯಸ್ಸಿಗೆ ಅಮೃತೇಶ್ವರಿ ಮೇಳದಲ್ಲಿ ಕಲಾವಿದರಾಗಿ ವೃತ್ತಿ ಬದುಕು ಆರಂಭಿಸಿದರು. ಸಾಲಿಗ್ರಾಮ, ಕಮಲಶಿಲೆ, ಸೌಕೂರು, ಗೋಳಿಗರಡಿ, ಕಳವಾಡಿ, ಪೆರ್ಡೂರು, ಹಾಲಾಡಿ, ಮಡಾಮಕ್ಕಿ, ಬಗ್ವಾಡಿ, ಮೇಗರವಳ್ಳಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.
51 ವರ್ಷ ಕಲಾಸೇವೆಗೈದಿರುವ ಲಕ್ಷ್ಮಣ ಕಾಂಚನ್, 25 ವರ್ಷಗಳಿಂದ ಅಮೃತೇಶ್ವರಿ ಪ್ರವಾಸಿ ಯಕ್ಷಗಾನ ಮಂಡಳಿಯ ಕಾಯಂ ಕಲಾವಿದರಾಗಿದ್ದರು. ಪೌರಾಣಿಕ ಪ್ರಸಂಗಗಳಲ್ಲಿ ಲವ-ಕುಶ, ಜಮದಗ್ನಿ, ಅರ್ಜುನ, ವೀರಮಣಿ, ಜಾಂಬವ, ಕೃಷ್ಣ, ಕಮಲಭೂಪ, ಕೌಂಡ್ಲಿಕ, ಸಾಲ್ವನ ಪಾತ್ರಗಳು ಮೆಚ್ಚುಗೆಗೆ ಪಾತ್ರವಾಗಿದ್ದವು. ಯಕ್ಷಗಾನ ಕಲಾರಂಗ ಮೂರು ವರ್ಷಗಳ ಹಿಂದೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.