ಯತ್ನಾಳ್, ರಮೇಶ್ ಜಾರಕಿಹೊಳಿ
ಬೆಳಗಾವಿ: ‘ಯಾರನ್ನೂ ಬೈಯ್ಯಬೇಡಿ, ಪಕ್ಷಕ್ಕೆ ಮುಜುಗರ ಆಗುವ ರೀತಿ ಮಾತನಾಡಬೇಡಿ ಎಂದು ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪದೇಪದೇ ಮನವಿ ಮಾಡುತ್ತಲೇ ಇದ್ದೇನೆ. ನನ್ನ ಮನವಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
‘ಯತ್ನಾಳ ಅವರು ಈಗಲೂ ನಮ್ಮ ತಂಡದಲ್ಲೇ ಇದ್ದಾರೆ. ಅವರಿಂದ ಅಂತರ ಕಾಯ್ದುಕೊಳ್ಳುವ ಅಗತ್ಯವಿಲ್ಲ. ಮಾತಿನ ಭರದಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ಅವರು ಯಾರಿಗೂ ಕೆಟ್ಟದು ಬಯಸುವ ವ್ಯಕ್ತಿಯಲ್ಲ ಎಂಬುದನ್ನು ರಾಜ್ಯದ ಜನರಿಗೆ ನಾನು ತಿಳಿಸಲು ಮಾತನಾಡುತ್ತಿದ್ದೇನೆ’ ಎಂದು ನಗರದಲ್ಲಿ ಅವರು ಸೋಮವಾರ ಮಾಧ್ಯಮದವರಿಗೆ ತಿಳಿಸಿದರು.
‘ನೇರವಾಗಿ ಮಾತನಾಡುವುದು ಯತ್ನಾಳ ಅವರು ಹುಟ್ಟುಗುಣ. ಕೆಲವೊಮ್ಮೆ ಅವರು ಹೇಳುವ ಅರ್ಥವೇ ಬೇರೆ, ಸುದ್ದಿಯಾಗುವುದೇ ಬೇರೆ ಆಗುತ್ತದೆ. ಅವರು ಪಕ್ಷದ ನಾಯಕರನ್ನು ಬೈದಿಲ್ಲ. ಒಂದು ಕುಟುಂಬದ ವಿರುದ್ಧ ಮಾತ್ರ ಮಾತನಾಡುತ್ತಿದ್ದಾರೆ. ಅವರ ಬಗ್ಗೆಯೂ ಮಾತನಾಡಬೇಡಿ ಎಂದೂ ನಾನು ಹೇಳಿದ್ದೇನೆ’ ಎಂದೂ ಹೇಳಿದರು.
‘ಬಿಜೆಪಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಬ್ಬಿದೆ. ನಮಗೆ ಇದೇ ಪಕ್ಷದಲ್ಲಿ ನ್ಯಾಯ ಸಿಗುತ್ತದೆ. ಬೇರೆ ಪಕ್ಷ ಕಟ್ಟುವ ಅಗತ್ಯವೇ ಇಲ್ಲ’ ಎಂದೂ ರಮೇಶ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.