ADVERTISEMENT

‘ಯತ್ನಾಳ ಹೇಳಿಕೆಯಿಂದ ಸರ್ಕಾರದಲ್ಲಿ ಅಸ್ಥಿರತೆ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 12:15 IST
Last Updated 9 ಅಕ್ಟೋಬರ್ 2019, 12:15 IST

ಬೆಳಗಾವಿ: ‘ಶಾಸಕ, ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಯಿಂದ ಸರ್ಕಾರದಲ್ಲಿ ಅಸ್ಥಿರತೆ ಮೂಡಲು ಸಾಧ್ಯತೆ ಇದೆ. ಆಡಳಿತದ ಮೇಲೆ ದುಷ್ಪರಿಣಾಮ ಉಂಟಾಗಬಹುದು’ ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿ ಆಂತರಿಕ ವಿಷಯಗಳ ಬಗ್ಗೆ ನಾನು ಮಾತನಾಡಲ್ಲ. ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ಆ ಪಕ್ಷದವರೇ ನಿರ್ಧರಿಸುತ್ತಾರೆ. ಆದರೆ, ಆ ಪಕ್ಷದ ಶಾಸಕರ ಭಿನ್ನಾಭಿಪ್ರಾಯದಿಂದ ಸರ್ಕಾರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎನ್ನುವುದು ನನ್ನ ಅಭಿಪ್ರಾಯ’ ಎಂದರು.

‘ಬಿಜೆಪಿ ಶಾಸಕರ ವಿಭಿನ್ನ ಹೇಳಿಕೆಗಳನ್ನು ನೋಡಿದರೆ, ಮಧ್ಯಂತರ ಚುನಾವಣೆ ಎದುರಾದರೂ ಆಶ್ಚರ್ಯವಿಲ್ಲ’ ಎಂದು ನುಡಿದರು.

ADVERTISEMENT

ಅಧಿವೇಶನ ವಿಸ್ತರಿಸಿ:

‘ರಾಜ್ಯದ ಹಲವು ಕಡೆ ಅತಿವೃಷ್ಟಿಯಾಗಿ ಜನರು ತತ್ತರಿಸಿ ಹೋಗಿದ್ದಾರೆ. ಸಾಕಷ್ಟು ಆಸ್ತಿ ಪಾಸ್ತಿ, ಪ್ರಾಣ ಹಾನಿ, ಬೆಳೆ ನಷ್ಟ ಸಂಭವಿಸಿದೆ. ಅಂದಾಜು ₹ 35 ಸಾವಿರ ಕೋಟಿ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದೆಲ್ಲರ ಬಗ್ಗೆ ಚರ್ಚಿಸಲು ಸಾಕಷ್ಟು ಸಮಯಾವಕಾಶ ಬೇಕು. ಕೇವಲ 3 ದಿನ ಅಧಿವೇಶನ ನಡೆಸಿದರೆ ಸಾಲದು, 8ರಿಂದ 10 ದಿನಗಳವರೆಗೆ ವಿಸ್ತರಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.