ADVERTISEMENT

ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಮತ್ತೆ ಯತ್ನಾಳ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 18:40 IST
Last Updated 9 ಡಿಸೆಂಬರ್ 2023, 18:40 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಹಾಸನ: ‘ರಾಜ್ಯದಲ್ಲಿ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಹೆಸರಿನಲ್ಲೇ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಮುಂದೆಯೂ ಗೆಲ್ಲುತ್ತೇವೆ. ಆದರೂ ತಾವು, ತಮ್ಮಪ್ಪ ಸೇರಿಯೇ ಹೆಚ್ಚು ಸೀಟ್ ತಂದಿದ್ದೇವೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಪಾದಿಸುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕಕ್ಕೆ ತೆರಳುವ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧ ಹರಿಹಾಯ್ದರು.

‘ಈ ಹಿಂದೆಯೇ ನನಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರೆ ಬಿಜೆಪಿಗೆ 130 ಸ್ಥಾನ ಬರೋದು. ರಾಜ್ಯದಲ್ಲಿ ಅತಿ ಹೆಚ್ಚು ಮುಸ್ಲಿಮರಿರುವ ಕ್ಷೇತ್ರದಲ್ಲಿ ನಾನು ಗೆದ್ದು ಬರುತ್ತೇನೆ’ ಎಂದು ಸವಾಲು ಹಾಕಿದರು.

ADVERTISEMENT

‘ನನ್ನ ಮೇಲೆ ಇ.ಡಿ, ಐಟಿ ದಾಳಿ ಮಾಡೋಕೆ ಆಗುವುದಿಲ್ಲ. ನನ್ನ ಮನೆಯಲ್ಲಿ ಏನೂ ಇಲ್ಲ. ಸಿಂಗಾಪುರ, ದುಬೈ, ಕುವೈತ್‌, ಅಮೆರಿಕದಲ್ಲಿ ಅಕ್ರಮ ಆಸ್ತಿ ಇಲ್ಲ. ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಲ್ಲ. ನನ್ನ ಕಾರಿನ ಮೇಲೆ ದಾಳಿ ಮಾಡಿದರೂ ₹2 ಲಕ್ಷ ಸಿಗಲ್ಲ’ ಎಂದರು.

ಪ್ರತಿಪಕ್ಷದ ನಾಯಕ ಆರ್. ಅಶೋಕ ಬಗ್ಗೆ ಶಾಸಕ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿ, ‘ಅಶೋಕ ಅವರು ಮೊನ್ನೆ ತೆಗೆದುಕೊಂಡ ನಿರ್ಣಯ ಸರಿ ಇದೆ. ನಮ್ಮೆಲ್ಲರ ಸಲಹೆ ಪಡೆದಿದ್ದಾರೆ’ ಎಂದರು.

‘ಮೌಲ್ವಿ ಅವರ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಎಲ್ಲ ದಾಖಲೆಗಳನ್ನು ಕೊಟ್ಟಿದ್ದು, ಎನ್‌ಐಎ ಕೂಡ ಮಾಹಿತಿ ಪಡೆಯುತ್ತಿದೆ. ಸಿದ್ದರಾಮಯ್ಯ ಏನು ಮಾಡಿದರೂ ಸರಿ ಎಂದು ಭಾವಿಸಿದ್ದಾರೆ. ನಿಜವಾಗಿಯೂ ಇದರಿಂದ ಮುಕ್ತವಾಗಬೇಕಾದರೆ ಎನ್‌ಐಎ ತನಿಖೆಗೆ ವಹಿಸುವುದು ಸೂಕ್ತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.