ಅಮೆರಿಕದಲ್ಲಿ ಎಸ್.ಎಲ್. ಭೈರಪ್ಪರಿಗೆ ನುಡಿನಮನ
ಮಿನಿಯಾಪೊಲೀಸ್ (ಅಮೆರಿಕ): ಅಮೆರಿಕದಲ್ಲಿ ಈ ತಿಂಗಳ 'ಮಿನ್ನೆಸೋಟ ಕನ್ನಡ ಓದುಗರ ಕಟ್ಟೆ' ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹರೀಶ ಕೃಷ್ಣಪ್ಪ ಅವರು, ಭೈರಪ್ಪ ಅವರ ಬರವಣಿಗೆ ತಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಕೆಲವು ಉದಾಹರಣೆಗಳ ಮೂಲಕ ವಿವರಿಸಿದರು. ವಾಸ್ತವವನ್ನು ವಾಸ್ತವವಾಗಿಯೇ ನಿರೂಪಿಸುವ ಭೈರಪ್ಪ ಅವರ ಶೈಲಿಯನ್ನು ಶ್ಲಾಘಿಸಿದ ಅವರು, “ಅವರ ಅಗಲಿಕೆಯು ಮನೆಯಲ್ಲಿ ಒಬ್ಬ ಹಿರಿಯ ಸದಸ್ಯರನ್ನು ಕಳೆದುಕೊಂಡಂತಿದೆ” ಎಂದು ಭಾವಪೂರ್ಣವಾಗಿ ಹೇಳಿದರು.
ನಂತರ ಮಾತನಾಡಿದ ರಂಗನಾಥ್ ಅವರು 'ಸಾರ್ಥ' ಕೃತಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸುರೇಶ್ ಅವರು 'ದಾಟು' ಕೃತಿಯನ್ನು ವಿಶ್ಲೇಷಿಸಿದರೆ, ಫಣೀಶ್ ಅವರು 'ಆವರಣ' ಕಾದಂಬರಿಯಲ್ಲಿದ್ದ ಅಂಶಗಳನ್ನು ಪ್ರಸ್ತಾಪಿಸಿದರು. ಪೂರ್ಣಿಮಾ ಅವರು ಪರ್ವ ಕಾದಂಬರಿಯಲ್ಲಿನ ಸ್ತ್ರೀಪಾತ್ರಗಳ ವೈಶಿಷ್ಟ್ಯವನ್ನು ಉಲ್ಲೇಖಿಸಿದರು. ಇದೇ ಸಂದರ್ಭದಲ್ಲಿ ಆನಂದ್ ರಾವ್ ಅವರು ಇತ್ತೀಚೆಗೆ ನೋಡಿದ್ದ ಭೈರಪ್ಪ ಅವರ ಸಂದರ್ಶನಗಳ ಕುರಿತಾಗಿ ಮಾತನಾಡಿದರು.
ಉಪಸ್ಥಿತರಿದ್ದವರು ಭೈರಪ್ಪ ಅವರ ಸಾಹಿತ್ಯ, ತತ್ತ್ವಚಿಂತನೆ ಹಾಗೂ ಕಾದಂಬರಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಹಿರಿಯ ಪತ್ರಕರ್ತ ಶ್ರೀಧರ್ ನಾಯಕ್ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಅವರು ತಮ್ಮ ಕೃತಿಗಳಾದ 'ಮಾರ್ಜಾಲ ಮಹಾಪುರಾಣ', 'ಭಾವಲೋಕ', 'ಶ್ರಾವಣದ ಹಕ್ಕಿ' ಮತ್ತು 'ಅರೆಮರುಳನ ಕಥಾಪ್ರಸಂಗಳು' ಕುರಿತಾಗಿ ಸ್ವಾರಸ್ಯವಾಗಿ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.