
ಜನವರಿ 24, ಲೋಕಕ್ಕೆಲ್ಲ ಸಂಕ್ರಾಂತಿ ಮುಗಿದು ಉತ್ತರಾಯಣ ಶುರು ಆಗಿತ್ತು. ಆದರೆ ದೂರದ ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ಸಂಕ್ರಾಂತಿ ಸಂಭ್ರಮ. ಅಂದು ಒಂದು ಕ್ರಾಂತಿ! ಅಲ್ಲ, ಯಕ್ಷಸಂಕ್ರಾಂತಿ. ನಮ್ಮ ಯಕ್ಷಮಿತ್ರರು ಜರ್ಮನಿ ಇ.ವಿ. ಯ ಸಂಯೋಜನೆ ಹಾಗೂ ಧೀಮಹಿಯ ಸಹಯೋಗದೊಂದಿಗೆ ಈ ಇದು 3ನೇ ಆವೃತ್ತಿ. ನಮಗೂ ಅದೇ ಸಂಭ್ರಮ, ನಮ್ಮ ಮನೆಯಲ್ಲಿ ಎರಡು ವಾರದಿಂದ ಯಕ್ಷಸಂಕ್ರಾಂತಿಯ ನಿರೀಕ್ಷೆ.
ಅಷ್ಟರಲ್ಲಿ ನಮ್ಮ ಯರ್ಲಾಂಗನ್ ವಿಜಯಕುಮಾರ್ ಕರೆ, ಈ ಯಕ್ಷಸಂಕ್ರಾಂತಿಯಲ್ಲಿ ನಮ್ಮ ಭಾವತರಂಗ ತಂಡದ ಕಾರ್ಯಕ್ರಮ ಅಂತ ಹೆಮ್ಮೆಯಿಂದ ಹೇಳಿಕೊಂಡರು, ನಿಮ್ಮದೇ ನಿರೂಪಣೆ ಅಂತ ಪ್ರೀತಿ ಪೂರಕವಾಗಿ ಅಂದ್ರು. ಆಯಿತು ಅಂತ ತಲೆದೂಗಿದೆ.
ಸಂಜೆ ಬಂದೇಬಿಡ್ತು, ಬಾಗಿಲಲ್ಲೇ ಎಲ್ಲರಿಗೂ ಎಳ್ಳು ಬೆಲ್ಲದ ಸ್ವಾಗತ. ಸಂಜೆ 5ಕ್ಕೆ ಸರಿಯಾಗಿ ಶುರು ಆಯಿತು. ಶ್ರೀ ವರುಣ್ ಛಾಯಾಪತಿ ಅವರ ಹಾಡಿನೊಂದಿಗೆ ತೆರೆ ಎತ್ತಲಾಯಿತು. ಪ್ರತಿವರ್ಷದಂತೆ ಈ ವರ್ಷ ಕೂಡ ಎರಡು ಕಾರ್ಯಕ್ರಮಗಳು. ಮೊದಲನೆಯದಾಗಿ, “ಜನಪದ ಹಾಗೂ ರಂಗಗೀತೆಗಳು“ ಭಾವತರಂಗ ತಂಡದಿಂದ. ಯಾವ ರೀತಿ ಹೂವಿನೊಂದಿಗೆ ನಾರು ಭಗವಂತನ ಸಿಂಗಾರಕ್ಕೆ ಏರುವುದೋ ಅದೇ ರೀತಿ ಭಾವತರಂಗ ತಂಡದ ಹಾಡುಗಳಿಗೆ ನನ್ನ ನಿರೂಪಣೆಯ ಮೂಲಕ ನಾನು ಕೈ ಜೋಡಿಸಿದೆ.
ಹಾಡುಗಳ ಆಯ್ಕೆ ಅದ್ಭುತ. ಹೊರಗಡೆ ಕೊರೆವ ಚಳಿ ಆದರೆ ಇಲ್ಲಿ ಮಧುರ ವಾತಾವರಣ. ನಮ್ಮನ್ನು ಎಲ್ಲಾ ದಿಗ್ಗಜರಾದ, ಶಂಕರನಾಗ್, ಲೋಕೇಶ್, ಸಿ ಅಶ್ವಥ್, ಬಿ ವಿ ಕಾರಂತ್, ಪುರಂದರ ದಾಸರು, ಸಂತ ಶಿಶುನಾಳ ಶರೀಫ, ಬಿ.ಕೆ. ಸುಮಿತ್ರಾ.. ನಾಟಕಗಳಾದ ಹಯವದನ, ಚಿತ್ರಪದ, ಜೋಕುಮಾರಸ್ವಾಮಿ, ನಾಗ ಮಂಡಲ, ಹೀಗೆ ಹತ್ತು ಹಲವು ದಿಗ್ಗಜರು ಹಾಗು ನಾಟಕಗಳ ಆಯ್ದ ಹಾಡುಗಳ ರಸಮಂಜರಿ ತರಂಗಗಳಾಗಿ ಹರಿ ಬಿಟ್ಟರು. ಶಂಕರನಾಗ್ ಹಾಗೂ ಲೋಕೇಶ್ ಅವರ ವಿಶೇಷ ಸ್ಮರಣೆಯೊಂದಿಗೆ ಕೊಳಲಿನಲ್ಲಿ ಹರಿಬಿಟ್ಟ ಮಾಲ್ಗುಡಿ ಡೇಸ್ ಮತ್ತು ತೇರ ಏರಿ ಅಂಬರದಾಗೆ ಹಾಡುಗಳು ನಮ್ಮ ಬಾಲ್ಯಕ್ಕೆ ಕರೆದೊಯ್ಯುವ ಮೂಲಕ ಎಲ್ಲರನ್ನೂ ಮೋಡಿ ಮಾಡಿತು.
ಭಾವತರಂಗ ತಂಡದ ಯೂರೋಪ್ ಗಾಯನ ಚಕ್ರವರ್ತಿ ವಿನಯ್ ಕುಮಾರ್ ಶೇಷಾದ್ರಿ ಹಾಡುಗಳ ಆಯ್ಕೆ ಹಾಗೂ ಈ ಕಾರ್ಯಕ್ರಮಕ್ಕೆ ಸರಿಯಾಗಿ ಸಂಯೋಜಿಸಿದ್ದರು. ಯುರೋಪ್ ಕಲಾಪೋಷಕ ವಿಜಯಕುಮಾರ್ ತಮ್ಮ ಸಂಸ್ಥೆ ಗ್ರಾಂಡ್-ಯೂರ್ ಮೂಲಕ ಧ್ವನಿ, ಮೈಕ್ ಹಾಗೂ ಇತರೆ ಹಿಮ್ಮೇಳದ ಕಾರ್ಯಾಚರಣೆ ನೋಡಿಕೊಂಡರು.ಇನ್ನು ಉಳಿದ ತಂಡ ಒಂದು ವಿದ್ಯಾರ್ಥಿ ವೃಂದವಾಗಿತ್ತು. ಸಹ ಗಾಯಕರಾಗಿ ಸಿಂಚನ ವಿನಯ್ ಕುಮಾರ್ ಹಾಗು ಪ್ರತ್ಯೂಷಾ, ಶ್ರೀರಾಮ ಸುಬ್ರಮಣ್ಯನ್. ರಾಹಿಲ್ ಸೋನಿ ಅವರು ತಬಲಾ, ಪ್ರಜ್ವಲ್ ವೀರೇಶ ಸಜ್ಜನ್ ಅವರು ಕಹೂನ್ ಹಾಗು ಶ್ರೀ ಪ್ರಮೋದ್ ರಾಮಕೃಷ್ಣ ಅವರು ಕೊಳಲನ್ನು ನುಡಿಸಿದರು.
ಅಲ್ಪ ವಿರಾಮದ ನಂತರ, ಬಹುನಿರೀಕ್ಷಿತ ಗದಾಯುದ್ಧ ಪ್ರಸಂಗ ಪ್ರಾರಂಭವಾಯಿತು. ಮಹಾಭಾರತದ ಕುರುಕ್ಷೇತ್ರ ಯುದ್ಧದ 18ನೇ ಹಾಗು ಕೊನೆ ದಿನದ ಈ ಯುದ್ಧ. ಮೊದಲಿಗೆ ಅಪೂರ್ವ ಬೆಳೆಯೂರು ಅವರ ಇನ್ನೊಂದು ಮುಖ ನೋಡಿದೆವು, ದುರ್ಯೋಧನನ ಪಾತ್ರದಲ್ಲಿ, ಯುದ್ಧದಲ್ಲಿ ಎಲ್ಲರನ್ನೂ ಕಳೆದುಕೊಂಡು ದುಃಖದ ಅಭಿನಯ ಯಾರಿಗೇ ಆದರೂ ಕರಳು ಕಿವುಚುವಂತೆ ನಟಿಸಿದರು. ಮುಂದೆ ಪ್ರಸಂಗದುದ್ದಕೂ ಅವರು ವೇದಿಕೆ ಮೇಲೆ ಆಗುವ ಸಣ್ಣ ಪುಟ್ಟ ವಿಷಯಗಳನ್ನು ಉಪಯೋಗಿಸಿ ಹಾಸ್ಯ ಚಟಾಕಿ ಹರಿಸುತ್ತ ತಮ್ಮ ಸಮಯಪ್ರಜ್ಞೆ ತೋರಿದರು. ಶಶಿಧರ ನಾಯಿರಿ ಅವರ ಭೀಮನ ಪಾತ್ರಕ್ಕೆ ಪರಕಾಯಪ್ರವೇಶ ಮಾಡಿದಂತೆ ಇತ್ತು. ಅವರನ್ನು ಸಾಮಾನ್ಯವಾಗಿ, ಸ್ತ್ರೀ ವೇಷ ಮತ್ತು ಹಾಸ್ಯಗಾರನ ವೇಷದಲ್ಲಿ ನೋಡಿದವರಿಗೆ ಈ ಭೀಮ ಆವೇಶ ಪ್ರೇಕ್ಷರನ್ನು ಆವೇಶದಿಂದ ಪ್ರತಿಕ್ರಿಯಿಸುವಂತೆ ಮಾಡಿತ್ತು. ಮನೆಗೆ ಬಂದ ಮೇಲೆ ಮಕ್ಕಳು ಭೀಮನ ಅನುಕರಣೆ ಮಾಡುವಷ್ಟು ಮೋಡಿ ಮಾಡಿದ್ದರು. ಸಂಜಯನಾಗಿ ಪೋಲೆಂಡಿನ ಪ್ರತೀಕ್ ಹೆಗಡೆ ಬೆಂಗಳೆ ಸೂಕ್ತ ನ್ಯಾಯ ದೊರಕಿಸಿಕೊಟ್ಟರು. ದೂತನಾಗಿ ಶ್ರೀಹರಿ ಹೊಸಮನೆ ತಮ್ಮ ಪ್ರಸ್ತುತ ವಿದ್ಯಮಾನಗಳ ಬಳಕೆಯಿಂದ ತಮ್ಮ ಹಾಸ್ಯದಿಂದ ಪ್ರೇಕ್ಷಕರನ್ನು ನೆಗೆಗಡಲಲ್ಲಿ ತೇಲಿಸಿದರು. ಧರ್ಮರಾಯನ ಪಾತ್ರದಲ್ಲಿ ಸುಷ್ಮಾ ಅವರು ಎಂದಿನಂತೆ ತಮ್ಮದೆ ಛಾಪಿನಲ್ಲಿ ಪಾತ್ರಕ್ಕೆ ಧರ್ಮದ ಛಾಪನ್ನು ಮೂಡಿಸಿದ್ದರು. ವಿಶೇಷ ಪ್ರಯೋಗವಾಗಿ ಪ್ರೇತನೃತ್ಯ, ಸುಕೃತ್ ಶ್ರೀಪಾದ ಅವರು ಪ್ರೇತಕ್ಕೂ ಒಂದು ಕಳೆ ಕೊಟ್ಟರು. ಧೀಮಹಿ ಮತ್ತು ಯಕ್ಷಮಿತ್ರರ ವಿದ್ಯಾರ್ಥಿ ಶ್ರೀಕುಮಾರ ಹೆಗಡೆ ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ನೃತ್ಯ ವೇದಿಕೆ ಮೇಲೆ ಮಾತನಾಡುತ್ತಿತ್ತು.
ಇವರೆಲ್ಲ ಬಡಗು ತಿಟ್ಟಿನವರಾದರೆ ಇನ್ನು ನಮ್ಮ ತೆಂಕುತಿಟ್ಟಿನ ಕಲಾವಿದರಾದ ಕೃತ್ತಿಕಾ ರಾವ್, ಕೃಷ್ಣ ಪಾತ್ರದಲ್ಲಿ ಪ್ರಬುದ್ಧತೆ ತೋರಿದರು. ಈ ಬಾರಿಯ ವಿಶೇಷವೆಂದರೆ ಎಡನೀರು ಮೇಳದ ಕಲಾವಿದರಾದ ಮಧುರಾಜ್ ಎಡನೀರು. ಮಾಡಿದ ಪಾತ್ರ ಅಶ್ವತ್ಥಾಮ, ತಮ್ಮ ಗಿರಕಿಯ ವೇಗದಿಂದ ಜನ ಮೆಚ್ಚುಗೆಗೆ ಪಾತ್ರರಾದರು. ತಂಡ ಬಹು ಪಾಲು ವೇದಿಕೆ ಮೇಲೆ ಏರಿದಾಗ, ವೇದಿಕೆ ಸಣ್ಣದಾಗಿ ಕಾಣುತಿತ್ತು. ಹಾಗೆ ಇತ್ತು ಇವರ ಅಭಿನಯ ಮತ್ತು ಮೋಡಿ.
ಈ ಬಾರಿಯ ವಿಶೇಷಗಳು ಹಲವಾರು. ಮೊದಲನೆಯದಾಗಿ ಬೆಳಕು ಹಾಗು ಮಂಜು ಸಂಯೋಜನೆ. ತೆಂಕುತಿಟ್ಟು ಹಾಗು ಬಡಗುತಿಟ್ಟುಗಳ ಸಮಾಗಮ, ವಿಶೇಷವೇನೆಂದರೆ ಆ ಪಾತ್ರಧಾರಿಗಳಿಗೆ ಅದೇ ತಿಟ್ಟಿನ ಪದ್ಯಗಳ ಬಳಕೆ. ಮೊದಲಬಾರಿಗೆ ಎರಡು ಗಂಟೆಗೂ ಹೆಚ್ಚಿನ ಕಾಲದ ಪ್ರಸಂಗ, ಪ್ರೇಕ್ಷಕರನ್ನು ಹಿಡಿದು ಕೂರಿಸಿ ಮಂತ್ರ ಮುಗ್ಧರನ್ನಾಗಿ ಮಾಡಿತು.
ಜೋಸಫಿನ್ ರಮ್ಯ ಆಂಟನಿ ಅವರಿಗೆ ತಮ್ಮ ನೃತ್ಯ ಹಾಗು ಕಲಾ ಪೋಷಣೆಗಾಗಿ ಸನ್ಮಾನಿಸಲಾಯಿತು. ಇವರು ಎಂಜಿನಿಯರ್ ಆದರೂ ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವೀಧರೆ. ಇವರು ನಮ್ಮ ನೃತ್ಯದ ಕುರಿತು ಕೃಷಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.