ADVERTISEMENT

ತೀರ್ಪು ಪ್ರಶ್ನಿಸಿ ಮೇಲ್ಮನವಿ

ಜೈಲು ಶಿಕ್ಷೆಗೆ ಗುರಿಯಾದ ದಂಪತಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ಓಸ್ಲೊ (ಪಿಟಿಐ): ಏಳು ವರ್ಷದ ಮಗನ ಮೇಲೆ `ತೀವ್ರ ದೌರ್ಜನ್ಯ' ನಡೆಸಿದ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾದ ಭಾರತೀಯ ಮೂಲದ ದಂಪತಿ, ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಚಂದ್ರಶೇಖರ್ ವಲ್ಲಭನೇನಿ ಮತ್ತು ಅವರ ಪತ್ನಿ ಅನುಪಮಾ ಅವರಿಗೆ ಓಸ್ಲೊ ಜಿಲ್ಲಾ ನ್ಯಾಯಾಲಯವು ಕ್ರಮವಾಗಿ 18 ಮತ್ತು 15 ತಿಂಗಳ ಜೈಲು ಶಿಕ್ಷೆಯನ್ನು ಮಂಗಳವಾರ ವಿಧಿಸಿತ್ತು.

ಚಂದ್ರಶೇಖರ್ ಮತ್ತು ಅನುಪಮಾ ಅವರು ತಮ್ಮ ಮಗ ಸಾಯಿ ಶ್ರೀರಾಂ ಶಾಲಾ ವಾಹನದಲ್ಲಿ ಮೂತ್ರ ವಿಸರ್ಜಿಸುತ್ತಿದ್ದ ಎಂದು ಆತನಿಗೆ ಶಿಸ್ತು ಕಲಿಸಲು ವಾಪಸು ಭಾರತಕ್ಕೆ ಕಳುಹಿಸುವುದಾಗಿ ಗದರಿದ್ದರು. ಇದನ್ನು ಆತ ಶಾಲೆಯ ಶಿಕ್ಷಕರಿಗೆ ತಿಳಿಸಿದ್ದ.

ಈ ಘಟನೆಯ ತರುವಾಯ ಭಾರತಕ್ಕೆ ಬಂದಿದ್ದ ದಂಪತಿ, ಕಾರಣಾಂತರದಿಂದ ಮಗನನ್ನು ಸ್ವದೇಶದಲ್ಲೇ ಬಿಟ್ಟು ನಾರ್ವೆಗೆ ಹೋಗಿದ್ದರು. ಆದರೆ, ಬಾಲಕ ಕಲಿಯುತ್ತಿದ್ದ ಶಾಲೆಯ ಶಿಕ್ಷಕರು ದಂಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಳೆದ ತಿಂಗಳು ದಂಪತಿಯನ್ನು ಬಂಧಿಸಿದ್ದರು. ಅವರ ವಿರುದ್ಧದ ಆಪಾದನೆ ಸಾಬೀತಾದ ಹಿನ್ನಲೆಯಲ್ಲಿ ಜಿಲ್ಲಾ ಕೋರ್ಟ್ ಶಿಕ್ಷೆ ವಿಧಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.