ಬೀಜಿಂಗ್ (ಪಿಟಿಐ): ಟಿಬೆಟಿನ ಇಬ್ಬರು ಮಾಜಿ ಬೌದ್ಧ ಬಿಕ್ಕುಗಳು ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಪ್ರಯತ್ನಿಸಿದ ಪ್ರತ್ಯೇಕ ಘಟನೆಗಳು ಚೀನಾದ ನೈಋತ್ಯ ಭಾಗದಲ್ಲಿ ನಡೆದಿದೆ. ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಕಮ್ಯುನಿಸ್ಟ್ ಸರ್ಕಾರವು ಸಂನ್ಯಾಸ ತ್ಯಜಿಸಿ ಸಾಮಾನ್ಯ ನಾಗರಿಕರಾದವರ ಮೇಲೆ ಹೇರುತ್ತಿರುವ ನಿರ್ಬಂಧಗಳನ್ನು ವಿರೋಧಿಸಿ ಮತ್ತು ಬೌದ್ಧ ಧರ್ಮಗುರು ದಲೈಲಾಮ ಅವರು ಟಿಬೆಟ್ಗೆ ವಾಪಸು ಬರಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಟಿಬೆಟ್ ಮತ್ತು ಚೀನಾದಲ್ಲಿ ಬೌದ್ಧ ಬಿಕ್ಕುಗಳು ಆತ್ಮಾಹುತಿ ಮಾಡಿಕೊಳ್ಳುತ್ತಿರುವ ಘಟನೆಗಳು ಮುಂದುವರಿದಿವೆ. ಈ ಘಟನೆ ಸಹ ಇಂತಹದ್ದೇ ಒಂದು ಪ್ರಕರಣ.
ಸಿಚುಯಾನ್ ಪ್ರಾಂತ್ಯದ ಅಬಾ ಕೌಂಟಿಯಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಹೋಟೆಲ್ ಒಂದರಲ್ಲಿ 18ರ ವಯೋಮಾನದ ಮಾಜಿ ಬಿಕ್ಕು ಒಬ್ಬರು ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ ಎಂದು ಅಬಾ ಕೌಂಟಿ ವಕ್ತಾರರ ಹೇಳಿಕೆಯನ್ನು ಸರ್ಕಾರಿ ಸುದ್ದಿಸಂಸ್ಥೆಯಾದ `ಕ್ಸಿನ್ಹುವಾ~ ವರದಿ ಮಾಡಿದೆ.
ಈ ಘಟನೆ ನಡೆಯುವುದಕ್ಕೂ ಕೆಲವು ಕಾಲ ಮೊದಲು, ಈ ಹೋಟೆಲ್ನ ಸಮೀಪದ ಸಾರ್ವಜನಿಕ ಸ್ಥಳದಲ್ಲಿ 28ರ ಹರೆಯದ ಮಾಜಿ ಬಿಕ್ಕು ಒಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಪ್ರಯತ್ನಿಸಿದ್ದರು. ಕೂಡಲೇ ಧಾವಿಸಿದ ಪೊಲೀಸರು ಬೆಂಕಿ ನಂದಿಸಿ, ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರು ಎಂದು ವಕ್ತಾರರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಬಿಕ್ಕು ಸ್ವಯಂ ಬಲಿದಾನಕ್ಕೆ ಪ್ರಯತ್ನಿಸಿದ್ದಾಗಿ ಹೇಳಿಕೆ ನೀಡಿದ್ದಾರೆ ಎಂದೂ ವಕ್ತಾರರು ತಿಳಿಸಿದ್ದಾರೆ.
ಸಿಚುಯಾನ್ ಪ್ರಾಂತ್ಯದ ಅಬಾ ಕೌಂಟಿಯಲ್ಲಿ ಟಿಬೆಟಿಯನ್-ಕ್ಯುಯಿಯಾಂಗ್ ಪ್ರದೇಶವು ಸ್ವಾಯತ್ತ ಸ್ಥಳ.
ಸಿಚುವಾನ್ ಪ್ರಾಂತೀಯ ಸರ್ಕಾರವು ಈ ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸಿದ್ದು, ಸಾವನ್ನಪ್ಪಿದ್ದ ಮತ್ತು ಆತ್ಮಾಹುತಿಗೆ ಪ್ರಯತ್ನಿಸಿದವರು ಕಿರ್ಟಿ ಬೌದ್ಧ ವಿಹಾರದ ಮಾಜಿ ಬಿಕ್ಕುಗಳು ಎಂದು ಹೇಳಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.