ADVERTISEMENT

ಮುಂಬೈ ದಾಳಿ ಸಾಕ್ಷಿಗಳ ಪಾಟಿಸವಾಲು

ಭಾರತಕ್ಕೆ ಬರಲಿರುವ ಪಾಕಿಸ್ತಾನದ ನಿಯೋಗ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ಇಸ್ಲಾಮಾಬಾದ್ (ಐಎಎನ್‌ಎಸ್): 26/11 ರ ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತದ ಸಾಕ್ಷಿಗಳನ್ನು ಪಾಟಿಸವಾಲಿಗೆ ಒಳಪಡಿಸಲು, ಪಾಕಿಸ್ತಾನದ ಎಂಟು ಜನರ ನಿಯೋಗವೊಂದು ಭಾರತಕ್ಕೆ ಮುಂದಿನ ವಾರ ಬರಲಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ನಿಯೋಗದಲ್ಲಿ ಪಾಕಿಸ್ತಾನದ ಪ್ರಾಸಿಕ್ಯೂಷನ್ ಹಾಗೂ ಆರೋಪಿ ಪರ ವಕೀಲರು ಇರುವುದಾಗಿ ಪಾಕಿಸ್ತಾನದ ಪತ್ರಿಕೆಯೊಂದು ವರದಿ ಮಾಡಿದೆ.

ಭಾರತ ಸರ್ಕಾರವು ಮುಂಬೈ ದಾಳಿಗೆ ಸಂಬಂಧಿಸಿದಂತೆ ನಾಲ್ಕು ಸಾಕ್ಷಿಗಳೆಂದು ಪರಿಗಣಿಸಿರುವ,   ಅಜ್ಮಲ್ ಕಸಬ್‌ನ ತಪ್ಪೊಪ್ಪಿಗೆಯ ಹೇಳಿಕೆಯನ್ನು ದಾಖಲಿಸಿರುವ ಆರ್.ವಿ. ಸಾವಂತ್‌ವಾಗ್ಳೆ, ತನಿಖಾ ಮುಖ್ಯಾಧಿಕಾರಿ ರಮೇಶ್ ಮಹಲೆ, ಗಣೇಶ್ ಧನ್‌ರಾಜ್  ಹಾಗೂ ಉಗ್ರರ ದಾಳಿಯಲ್ಲಿ ಹತ್ಯೆಯಾದವರ ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಚಿಂತಮನ್ ಮೋಹಿತೆ ಅವರನ್ನು ಪಾಟಿಸವಾಲಿಗೆ ಒಳಪಡಿಸಲು ಹಾಗೂ ಹೇಳಿಕೆಗಳನ್ನು ದಾಖಲಿಸಲು ಸಮಯ ನಿಗದಿಪಡಿಸುವಂತೆ ಪಾಕಿಸ್ತಾನದ ತನಿಖಾ ಸಂಸ್ಥೆಯ ವಿಶೇಷ ಪ್ರಾಸಿಕ್ಯೂಟರ್ ಮಹಮದ್ ಆಜಾದ್ ಚೌಧರಿ ಭಾರತ ಸರ್ಕಾರಕ್ಕೆ ತಿಳಿಸಿದ್ದಾರೆ.

ಸೆ.5-6ರಂದು ವಿಮಾನ ಇಲ್ಲದಿರುವುದರಿಂದ ಸೆ.7ರಂದು ಮುಂಬೈಗೆ ಬರುವಂತೆ ಪಾಕಿಸ್ತಾನದ ನಿಯೋಗಕ್ಕೆ ಭಾರತದ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.