ADVERTISEMENT

ವಿದೇಶ -ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಭಾರತ- ಪಾಕಿಸ್ತಾನ ಒಪ್ಪಂದ
ಇಸ್ಲಾಮಾಬಾದ್, (ಐಎಎನ್‌ಎಸ್): ಗಡಿಯಾಚೆಗಿನ ಮಾದಕ ವಸ್ತು ಕಳ್ಳಸಾಗಣೆಗೆ ನಿಯಂತ್ರಣ ಹೇರಲು ಭಾರತ ಹಾಗೂ ಪಾಕಿಸ್ತಾನ ರಾವಲ್ಪಿಂಡಿಯಲ್ಲಿ ಸೋಮವಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

ಇದಕ್ಕೆ ಮುನ್ನ ಮಹಾ ನಿರ್ದೇಶಕ ಒ.ಪಿ.ಎಸ್. ಮಲಿಕ್ ನೇತೃತ್ವದ ಭಾರತದ 11 ಸದಸ್ಯರ ತಂಡ ಪಾಕಿಸ್ತಾನದ ಮಾದಕ ವಸ್ತು ವಿರೋಧಿ ಪಡೆಯ ಮಹಾ ನಿರ್ದೇಶಕ ಮೇಜರ್ ಜನರಲ್ ಸೈಯದ್ ಶಕೀಲ್ ಹುಸೇನ್ ಅವರೊಂದಿಗೆ ಚರ್ಚೆ ನಡೆಸಿತು.

ಭಯೋತ್ಪಾದನೆಗೆ ನೆರವು: ಮೂವರು ತಪ್ಪಿತಸ್ಥರು
ವಾಷಿಂಗ್ಟನ್, (ಪಿಟಿಐ):
ಭಯೋತ್ಪಾದಕ ಸಂಘಟನೆಯ ಸದಸ್ಯನೊಬ್ಬ ಅಮೆರಿಕವನ್ನು ಸೇರಿಕೊಳ್ಳಲು  ನೆರವಾದ ಆಪಾದನೆಗಾಗಿ ಪಾಕಿಸ್ತಾನ ಮೂಲದ ಮೂವರನ್ನು ಇಲ್ಲಿನ ನ್ಯಾಯಾಲಯ ತಪ್ಪಿತಸ್ಥರು ಎಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 9ಕ್ಕೆ ಪ್ರಕಟಿಸುವುದಾಗಿ ತಿಳಿಸಿದೆ.

ಇಫ್ರಾನ್ ಉಲ್ ಹಕ್ (47), ಕ್ವಾಸಿಮ್ ಅಲಿ (32) ಮತ್ತು ಜಾಹಿದ್ ಯೂಸುಫ್ (43) ವಿದೇಶಿ ಭಯೋತ್ಪಾದಕ ಸಂಘಟನೆಗೆ ನೆರವಾಗಿದ್ದ ಆಪಾದನೆ ಎದುರಿಸುತ್ತಿದ್ದರು. ಈ ಅಪರಾಧಿಗಳಿಗೆ ಗರಿಷ್ಠ 15 ವರ್ಷಗಳ ಸೆರೆವಾಸ ಮತ್ತು 2.5 ಲಕ್ಷ ಡಾಲರ್ ದಂಡ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಶ್ವಸಂಸ್ಥೆ ಮಹಾಸಭೆ ಆರಂಭ
ವಿಶ್ವಸಂಸ್ಥೆ, (ಪಿಟಿಐ):
ವಿಶ್ವಸಂಸ್ಥೆ ಮಹಾಸಭೆಯ (ಯುಎನ್‌ಜಿಎ) 66ನೇ ಅಧಿವೇಶನದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ಮನಮೋಹನ್ ಸಿಂಗ್, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ವಿಶ್ವದ ಹಲವು ನಾಯಕರು ಮುಂದಿನ ವಾರ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ.

ಅಧಿವೇಶನ ಮಂಗಳವಾರ ಆರಂಭಗೊಂಡಿದ್ದು, ಸಿಂಗ್ ಸೆ. 24ರಂದು ನಡೆಯಲಿರುವ ವಿಶ್ವ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. 

ಭಯೋತ್ಪಾದನೆ, ಆರ್ಥಿಕ ಬಿಕ್ಕಟ್ಟು, ಅಂತರ ರಾಷ್ಟ್ರೀಯ ಭದ್ರತೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ರಾಜಕೀಯ ಅಸ್ಥಿರತೆಯಂತಹ ಹಲವು ವಿಷಯಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT