ಕೊಲಂಬೊ (ಪಿಟಿಐ): ಎಲ್ಟಿಟಿಇ ವಿರುದ್ಧ ಶ್ರೀಲಂಕಾ ನಡೆಸಿದೆ ಎನ್ನಲಾದ ಯುದ್ಧಾಪರಾಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವಂತೆ ಅಮೆರಿಕ ಒತ್ತಾಯಿಸಿದೆ.
ಜಿನಿವಾದಲ್ಲಿ ಸೋಮವಾರ ಆರಂಭವಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಶ್ರೀಲಂಕಾ ವಿರುದ್ಧ ಯುದ್ಧಾಪರಾಧಗಳ ತನಿಖೆಗೆ ಒತ್ತಾಯಿಸಿದ ನಿರ್ಣಯವನ್ನು ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ಮಂಡಿಸಿದವು. ಮಾರ್ಚ್ ಕೊನೆಯಲ್ಲಿ ನಿರ್ಣಯವನ್ನು ಮತಕ್ಕೆ ಹಾಕುವ ಸಾಧ್ಯತೆ ಇದೆ.
ಅಲ್ಪಸಂಖ್ಯಾತ ತಮಿಳು ಸಮುದಾಯದ ವಿರುದ್ಧ ಶ್ರೀಲಂಕಾ ನಡೆಸಿದ ದೌರ್ಜನ್ಯ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಮಂಡಿಸುತ್ತಿರುವ ಮೂರನೇ ನಿರ್ಣಯ ಇದಾಗಿದೆ.
ಅಮೆರಿಕ ಬೆಂಬಲಿತ ನಿರ್ಣಯದ ವಿರುದ್ಧ ಕೊಲಂಬೊ ಕೂಡ ಜಾಗತಿಕ ಮಟ್ಟದಲ್ಲಿ ವ್ಯವಸ್ಥಿತ ಲಾಬಿ ನಡೆಸಿದೆ. ಶ್ರೀಲಂಕಾವನ್ನು ಗುರಿಯಾಗಿಸಿಕೊಂಡಿರುವ ಅಮೆರಿಕ ಮತ್ತು ಬ್ರಿಟನ್, ಎಲ್ಟಿಟಿಇ ಪರ ವಕಾಲತು ನಡೆಸಿವೆ ಎಂದು ಅದು ಆರೋಪಿಸಿದೆ.
30 ವರ್ಷಗಳಷ್ಟು ಹಳೆಯದಾದ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಮಯಾವಕಾಶ ನೀಡುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿದೆ.
2009ರಲ್ಲಿ ಎಲ್ಟಿಟಿಇ ವಿರುದ್ಧ ಶ್ರೀಲಂಕಾ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸುಮಾರು 40 ಸಾವಿರ ತಮಿಳು ನಾಗರಿಕರನ್ನು ಹತ್ಯೆ ಮಾಡಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಮತ್ತು ತಜ್ಞರು ಆರೋಪಿಸಿದ್ದರು.
ಭಾರತದ ನಿಲುವು: ಆಶ್ವಾಸನೆ ನೀಡದ ಸಿಂಗ್
ಮ್ಯಾನ್ಮಾರ್ನ ನೇ ಪಿ ತಾವ್ ನಗರದಲ್ಲಿ ನಡೆಯುತ್ತಿರುವ ಬಿಮ್ಸ್ಟೆಕ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಮಂಗಳವಾರ ಪರಸ್ಪರ ಭೇಟಿಯಾದರು.
ಡಿಎಂಕೆ ಸೇರಿದಂತೆ ತಮಿಳುನಾಡಿನ ಬಹುತೇಕ ರಾಜಕೀಯ ಪಕ್ಷಗಳ ವಿರೋಧದ ನಡುವೆಯೂ ಸಿಂಗ್, ರಾಜಪಕ್ಸೆ ಜತೆ 25 ನಿಮಿಷ ಚರ್ಚೆ ನಡೆಸಿದರು. ಆದರೆ, ಈ ಸಂದರ್ಭದಲ್ಲಿ ಅವರು ಶ್ರೀಲಂಕಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ನಿರ್ಣಯಕ್ಕೆ ಸಂಬಂಧಿಸಿದಂತೆ ಭಾರತದ ನಿಲುವನ್ನು ಸ್ಪಷ್ಟಪಡಿಸಲಿಲ್ಲ ಹಾಗೂ ಈ ಕುರಿತು ಯಾವುದೇ ಆಶ್ವಾಸನೆಯನ್ನೂ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.