ಲಂಡನ್ (ಪಿಟಿಐ): ಭಾರತ ಸರ್ಕಾರ, ಅನಿವಾಸಿ ಭಾರತೀಯರನ್ನು ಪ್ರತಿನಿಧಿಸುವ ಒಬ್ಬ ಅನಿವಾಸಿ ಭಾರತೀಯನನ್ನು ಸಂಸತ್ತಿಗೆ ನಾಮಕರಣ ಮಾಡಲು ಅನುಕೂಲವಾಗುವಂತೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಬೇಕೆಂದು ಇಲ್ಲಿನ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಇಂಡಿಯನ್ ಒವರ್ ಸೀಜ್ ಕಾಂಗ್ರೆಸ್) ಅಧ್ಯಕ್ಷ ಡಿ.ಎಲ್. ಕಲ್ಹಣ್ ಅವರು ಆಗ್ರಹಿಸಿದ್ದಾರೆ.
ಐಒಸಿಯ ಕಾರ್ಯಕಾರಿ ಸಮಿತಿಯ ಕಾಯಂ ಅತಿಥಿ ಗುಲ್ಚೈನ್ ಸಿಂಗ್ ಚರಕ್ ಅವರ ಗೌರವಾರ್ಥ ಭಾನುವಾರ ಸಂಜೆ ಇಲ್ಲಿನ ಇಂಡಿಯನ್ ಜಮಖಾನಾ ಕ್ಲಬ್ ನಲ್ಲಿ ಏರ್ಪಡಿಸಿದ್ದ ಸಮಾರಂಬದಲ್ಲಿ ಮಾತನಾಡುತ್ತಿದ್ದ ಕಲ್ಹಣ್ ಅವರು, ಭಾರತದ ಪಾಸ್ ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯ ಪ್ರಜೆಗಳ ಪ್ರತಿನಿಧಿಯೊಬ್ಬ ಸಂಸತ್ತಿನಲ್ಲಿ ಇರಬೇಕು, ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸಂವಿಧಾನದಲ್ಲಿ ಅವಕಾಶ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪಾಸ್ ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕನ್ನು ಗಳಿಸಿಕೊಡುವಲ್ಲಿ ಐಓಸಿ ಶ್ರಮಿಸಿತ್ತು, ಆದರೆ ಅನಿವಾಸಿ ಭಾರತೀಯರ ಮತಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಅವರ ಮತಗಳು ತಾಯ್ನಾಡಿನಲ್ಲಿ ಎಂಥ ಬದಲಾವಣೆ ತರಬಲ್ಲದು ಎಂಬ ಬಗ್ಗೆ ಯಾರಿಗೂ ಕಲ್ಪನೆಯಿಲ್ಲ ಎಂದು ಅವರು ವಿಷಾದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.