ADVERTISEMENT

ಹಸ್ತಾಂತರ ತಪ್ಪಿಸಿಕೊಳ್ಳಲು ಹನೀಫ್‌ ಯತ್ನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST
ಹಸ್ತಾಂತರ ತಪ್ಪಿಸಿಕೊಳ್ಳಲು ಹನೀಫ್‌ ಯತ್ನ
ಹಸ್ತಾಂತರ ತಪ್ಪಿಸಿಕೊಳ್ಳಲು ಹನೀಫ್‌ ಯತ್ನ   

ಲಂಡನ್‌ (ಪಿಟಿಐ): ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ ಹಾಗೂ ೧೯೯೩ ಗುಜರಾತ್‌ ನಲ್ಲಿ ಎರಡು ಬಾಂಬ್‌ ಸ್ಫೋಟ ಪ್ರಕರಣ­ದಲ್ಲಿ ಪೊಲೀಸರಿಗೆ ಬೇಕಾಗಿರುವ ಟೈಗರ್‌ ಹನೀಫ್‌ನನ್ನು (೫೧) ಭಾರತಕ್ಕೆ ಹಸ್ತಾಂತರಿ­ಸುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಅದರಿಂದ ತಪ್ಪಿಸಿಕೊಳ್ಳಲು ಆತ ಅಂತಿಮ ಹೋರಾಟ ನಡೆಸಿದ್ದಾನೆ.

೨೦೧೦ರ ಫೆಬ್ರುವರಿಯಲ್ಲಿ ಗ್ರೇಟರ್‌ ಮ್ಯಾಂಚೆಸ್ಟರ್‌ ಬಳಿಯ ಬೋಲ್ಟನ್‌ನ ದಿನಸಿ ಅಂಗಡಿಯಲ್ಲಿ ಸ್ಕಾಟ್‌ಲೆಂಡ್‌ ಯಾರ್ಡ್‌ ಪೊಲೀಸರು ಟೈಗರ್‌ ಹನೀಫ್‌ (ಪೂರ್ಣ ಹೆಸರು ಮೊಹ್ಮದ್‌ ಹನೀಫ್‌ ಉಮೇರ್ಜಿ ಪಟೇಲ್‌)ನನ್ನು ಹಸ್ತಾಂತರ ವಾರಂಟ್‌ ಅನ್ವಯ ಬಂಧಿಸಿದ್ದರು. ಹಾಗಾಗಿ ಬ್ರಿಟನ್‌ ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಮುಂದಾಗಿತ್ತು. ಹಸ್ತಾಂತರ ಬೆದರಿಕೆಯಲ್ಲಿದ್ದ ಹನೀಫ್‌ ಅದರಿಂದ ಪಾರಾಗಲು ಹಲವು ಯತ್ನ ನಡೆಸಿದ್ದು, ವಕೀಲರ ಮೂಲಕ ಗೃಹ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ್ದ.

ಆತ ಸಲ್ಲಿಸಿರುವ ಎಲ್ಲಾ ಮನವಿಗಳನ್ನು ಪರಿಶೀಲಿಸ­ಲಾಗುತ್ತಿದೆ ಎಂದು ಗೃಹ ಇಲಾಖೆ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಹಸ್ತಾಂತರ ವಾರಂಟ್‌ ಅನ್ವಯ ಆತನನ್ನು ಬಂಧಿಸಿರುವ ಕಾರಣದಿಂದ ಆತ ಬ್ರಿಟನ್‌ನಲ್ಲಿ ನೆಲೆ ನಿಲ್ಲುವ ಅವಕಾಶ ಕಳೆದುಕೊಂಡಿದ್ದಾನೆ. ಒಂದೊಮ್ಮೆ ತನ್ನನ್ನು ಹಸ್ತಾಂತರ ಮಾಡಿದರೆ ಪೊಲೀಸರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಾರೆ ಎನ್ನುವ ಹೊಸ ವಾದ ಮಂಡಿಸಿದ್ದಾನೆ. ಕಳೆದ ಏಪ್ರಿಲ್‌ನಲ್ಲಿ ಬ್ರಿಟನ್‌ ಹೈಕೋರ್ಟ್‌ ಆತನ ಅರ್ಜಿಯನ್ನು ವಜಾ ಮಾಡಿದ್ದು, ಪ್ರಕರಣವನ್ನು ಪರಿಶೀಲಿಸಲು ಗೃಹ ಕಾರ್ಯದರ್ಶಿಗೆ ವರ್ಗಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.