
ಸುರಿನ್/ಬ್ಯಾಂಕಾಕ್: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದೆ. ‘ಕಾಂಬೋಡಿಯಾ ಶನಿವಾರ ನಡೆಸಿದ ದಾಳಿಯಲ್ಲಿ ನಮ್ಮ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ’ ಎಂದು ಥಾಯ್ಲೆಂಡ್ ಹೇಳಿದೆ.
ಇದೇ ಜುಲೈನಲ್ಲಿ ಈ ಎರಡೂ ದೇಶಗಳ ಮಧ್ಯೆ ಸಂಘರ್ಷ ನಡೆದಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತನ್ನ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳು ಕದನವಿರಾಮಕ್ಕೆ ಒಪ್ಪಿರುವುದಾಗಿಯೂ ಹೇಳಿದ್ದರು.
ಕನದವಿರಾಮ ಪ್ರಸ್ತಾವಕ್ಕೆ ತಾವು ಒಪ್ಪಿಗೆ ನೀಡಿಲ್ಲ ಎಂದು ಥಾಯ್ಲೆಂಡ್ ಹೇಳಿದ್ದು, ಕಾಂಬೋಡಿಯಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಂಘರ್ಷ ಅಂತ್ಯಗೊಳಿಸದಿದ್ದರೆ, ವ್ಯಾಪಾರ ನಿಲ್ಲಿಸುವುದಾಗಿ ಟ್ರಂಪ್ ಅವರು ಒತ್ತಡ ಹೇರಿದ್ದರಿಂದ ಮಲೇಷ್ಯಾವು ಕದನವಿರಾಮ ಪ್ರಸ್ತಾವಕ್ಕೆ ಎರಡೂ ದೇಶಗಳೊಂದಿಗೆ ಮಾತುಕತೆ ನಡೆಸಿತ್ತು.
‘ಮತ್ತೊಮ್ಮೆ ಕದನವಿರಾಮ ಜಾರಿಗೊಳಿಸುವ ಬಗ್ಗೆ ಥಾಯ್ಲೆಂಡ್ ಪ್ರಧಾನಿ ಅನುಟಿನ್ ಚರ್ನ್ವಿರಕುಲ್ ಮತ್ತು ಕಾಂಬೋಡಿಯಾ ಪ್ರಧಾನಿ ಹು ಮಾನೇಟ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಇಬ್ಬರು ಇದಕ್ಕೆ ಒಪ್ಪಿಕೊಂಡಿದ್ದಾರೆ’ ಎಂದು ಟ್ರಂಪ್ ಶುಕ್ರವಾರ ಘೋಷಿಸಿದರು. ಆದರೆ, ಈ ಘೋಷಣೆ ಬಗ್ಗೆ ಇಬ್ಬರೂ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಡಿಸೆಂಬರ್ 7ರಂದು ಆರಂಭಗೊಂಡ ಸಂಘರ್ಷದಲ್ಲಿ ಎರಡೂ ದೇಶಗಳ ಸುಮಾರು 12 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ನಿರಾಶ್ರಿತರಾಗಿದ್ದಾರೆ. ತಮ್ಮ ಸೈನಿಕರು ಮೃತಪಟ್ಟ ಬಗ್ಗೆ ಕಾಂಬೋಡಿಯಾ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ, 11 ನಾಗರಿಕರು ಮೃತಪಟ್ಟು, 76 ಮಂದಿ ಗಾಯಗೊಂಡಿದ್ದಾರೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.