ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್, ಈಗ ವಿವಿಧ ಪ್ರಕರಣಗಳ ವಿಚಾರಣೆ ಎದುರಿಸಬೇಕಿದೆ.
ಇದುವರೆಗೆ ಬೇಹುಗಾರಿಕೆ ಕುರಿತ ಪ್ರಕರಣ ವಿಚಾರಣೆ ಮಾತ್ರ ಮುಗಿದಿದೆ. ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಜಾಧವ್ ವಿಚಾರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಈ ಪ್ರಕರಣಗಳ ವಿಚಾರಣೆಗೆ ಅನುವಾಗುವಂತೆ ಭಾರತದ 13 ಅಧಿಕಾರಿಗಳಿಂದ ಮಾಹಿತಿ ಬಯಸಿದೆ. ಆದರೆ ಆ ಅಧಿಕಾರಿಗಳು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಅಲ್ಲದೆ, ಕುಲಭೂಷಣ್ ಜಾಧವ್ ಅವರ ನೌಕಾ ಪಡೆಯ ಸೇವಾ ಕಡತ, ಪಿಂಚಣಿಗೆ ಸಂಬಂಧಿಸಿದ ಬ್ಯಾಂಕ್ ದಾಖಲೆ ಮತ್ತು ಮುಬಾರಕ್ ಹುಸೇನ್ ಪಟೇಲ್ ಹೆಸರಿನಲ್ಲಿ ಪಾಸ್ಪೋರ್ಟ್ ನೀಡಿರುವ ಬಗ್ಗೆ ಮಾಹಿತಿ ಕೋರಿದೆ. ಪಟೇಲ್ ಹೆಸರಿನಲ್ಲಿ ಪಾಸ್ಪೋರ್ಟ್ ಹೇಗೆ ನೀಡಲಾಯಿತು ಮತ್ತು ಆ ಪಾಸ್ಪೋರ್ಟ್ ನಕಲಿಯೋ ಅಸಲಿಯೋ ಎಂಬ ಬಗ್ಗೆ ತಿಳಿಯಬಯಸಿದೆ.
ಮುಂಬೈ, ಪುಣೆ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಮುಬಾರಕ್ ಹುಸೇನ್ ಪಟೇಲ್ ಹೆಸರಿನಲ್ಲಿ ಜಾಧವ್ ಹೊಂದಿರುವ ಆಸ್ತಿ ಕುರಿತ ಮಾಹಿತಿಯನ್ನೂ ಕೇಳಿದೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.