(ಸಾಂದರ್ಭಿಕ ಚಿತ್ರ)
ಢಾಕಾ: ಬಾಂಗ್ಲಾದೇಶದ ಮೈಮೆನ್ಸಿಂಗ್ನ ಉಪ ಜಿಲ್ಲೆ ತ್ರಿಶಾಲ್ ಪ್ರದೇಶದ ಬೋಗರ್ ಬಜಾರ್ನಲ್ಲಿ ಸೋಮವಾರ ತಡರಾತ್ರಿ 62 ವರ್ಷದ ಹಿಂದೂ ವ್ಯಾಪಾರಿಯನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿದೆ.
ಮೃತ ವ್ಯಕ್ತಿಯನ್ನು ಸೌತ್ಕಂಡಾ ನಿವಾಸಿ, ‘ಭಾಯಿ, ಭಾಯಿ ಎಂಟರ್ಪ್ರೈಸಸ್’ ಮಾಲೀಕ ಸುಸೇನ್ ಚಂದ್ರ ಸರ್ಕಾರ್ ಎಂದು ಗುರುತಿಸಲಾಗಿದೆ.
‘ತಡರಾತ್ರಿ ಸುಸೇನ್ ಚಂದ್ರ ಅವರನ್ನು, ಅವರ ಅಂಗಡಿಯಲ್ಲೇ ಹತ್ಯೆ ಮಾಡಿದ ಆರೋಪಿಗಳು, ಹೊರಗಿನಿಂದ ಬಾಗಿಲು ಹಾಕಿಕೊಂಡು ಹೋಗಿದ್ದರು. ಕುಟುಂಬ ಸದಸ್ಯರು ಸುಸೇನ್ಗಾಗಿ ಹುಡುಕಾಟ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಅಂಗಡಿಯ ಬಾಗಿಲು ತೆರೆದಾಗ ಕೊಲೆ ಆಗಿರುವುದು ಗಮನಕ್ಕೆ ಬಂದಿದೆ’ ಎಂದು ತ್ರಿಶಾಲ್ ಪೊಲೀಸ್ ಠಾಣಾಧಿಕಾರಿ ಮಹಮದ್ ಫಿರೋಜ್ ಹುಸೇನ್ ತಿಳಿಸಿದ್ದಾರೆ.
‘ನಾವು ಹಲವು ವರ್ಷಗಳಿಂದ ಅಕ್ಕಿ ವ್ಯಾಪಾರ ನಡೆಸುತ್ತಿದ್ದೇವೆ. ಯಾರೂ ಶತ್ರುಗಳಿಲ್ಲ. ತಂದೆಯನ್ನು ಕೊಲೆ ಮಾಡಿದ ಆರೋಪಿಗಳು, ಅಂಗಡಿಯಿಂದ ಲಕ್ಷಾಂತರ ರೂಪಾಯಿ ನಗದನ್ನೂ ಕಳವು ಮಾಡಿದ್ದಾರೆ’ ಎಂದು ಸುಸೇನ್ ಚಂದ್ರ ಅವರ ಪುತ್ರ ಸುಜನ್ ಸರ್ಕಾರ್ ಮಾಧ್ಯಮಕ್ಕೆ ತಿಳಿಸಿದರು.
2025ರ ಡಿಸೆಂಬರ್ನಲ್ಲಿ ನಡೆದ ‘ಇನ್ಕ್ವಿಲಾಬ್ ಮಂಚ್’ ಸಂಘಟನೆಯ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿಗಳು ಹೆಚ್ಚುತ್ತಿವೆ.
‘ಕಳವಳಕಾರಿ’: ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಬಾಂಗ್ಲಾದೇಶದಲ್ಲಿ ಕೋಮು ಗಲಭೆಗಳು ಹೆಚ್ಚುತ್ತಿದೆ. 2025ರ ಡಿಸೆಂಬರ್ನಿಂದ ಈಚೆಗೆ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ 51 ಘಟನೆಗಳು ವರದಿಯಾಗಿವೆ ಎಂದು ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಏಕತಾ ಮಂಡಳಿ ಕಳವಳ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದಲ್ಲಿ ಫೆಬ್ರುವರಿ 12ರಂದು ಸಂಸತ್ ಚುನಾವಣೆ ನಡೆಯಲಿದೆ. 2022ರ ಜನಸಂಖ್ಯಾ ಸಮೀಕ್ಷೆಯಂತೆ ಬಾಂಗ್ಲಾದಲ್ಲಿ ಹಿಂದೂಗಳ ಜನಸಂಖ್ಯೆ 1.31 ಕೋಟಿಯಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.