ADVERTISEMENT

ಕೆನಡಾದ ಮತ್ತೊಂದು ‘ಹಿಂದೂ‘ ದೇವಾಲಯ ವಿರೂಪ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 8:24 IST
Last Updated 6 ಏಪ್ರಿಲ್ 2023, 8:24 IST
   

ಕೆನಡಾ : ಹಿಂದೂ ದೇವಸ್ಥಾನದ ಗೋಡೆಯ ಮೇಲೆ ‘ಹಿಂದೂ‘ ವಿರೋಧಿ ಬರಹಗಳನ್ನು ಗೀಚುವ ಮೂಲಕ ದೇವಸ್ಥಾನವನ್ನು ವಿರೂಪಗೊಳಿಸಿದ ಘಟನೆ ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ. ಕಳೆದ ಒಂದೂವರೆ ವರ್ಷದಲ್ಲಿ ನಡೆದ ಐದನೇ ಪ್ರಕರಣ ಇದಾಗಿದೆ.

ಬುಧವಾರ ರಾತ್ರಿ ಒಂಟಾರಿಯೋದ ವಿಂಡ್ಸರ್ ನಗರದಲ್ಲಿರುವ ಸ್ವಾಮಿನಾರಾಯಣ ಮಂದಿರದ (ಬಿಎಪಿಎಸ್‌) ಮೇಲೆ ‘ಹಿಂದೂ ವಿರೋಧಿ‘ ಬರಹಗಳನ್ನು ಗೀಚುವ ಮೂಲಕ ವಿರೂಪಗೊಳಿಸಲಾಗಿತ್ತು. ಮಾಹಿತಿ ಮೇರೆಗೆ ವಿಂಡ್ಸರ್‌ ಪೊಲೀಸರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದೇವಸ್ಥಾನದ ಗೋಡೆಯ ಮೇಲೆ ಕಪ್ಪು ಮಸಿಯಿಂದ ‘ಹಿಂದೂಸ್ಥಾನ ಮುರ್ದಾಬಾದ್‌‘ ಎಂದು ಬರೆದಿರುವುದು ಬೆಳಕಿಗೆ ಬಂದಿದೆ.ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ.

ಹತ್ತಿರದ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಇಬ್ಬರು ದುಷ್ಕರ್ಮಿಗಳು ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಈ ಕೃತ್ಯ ನಡೆಸಿರುವುದನ್ನು ಪತ್ತೆ ಹೆಚ್ಚಿದ್ದಾರೆ. ಒಬ್ಬ ದುಷ್ಕರ್ಮಿ ಗೋಡೆಯ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆದರೆ, ಇನ್ನೊಬ್ಬ ದುಷ್ಕರ್ಮಿ ಕಾವಲು ಕಾಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ADVERTISEMENT

ಸ್ಟ್ಯಾಟಿಕ್ಸ್‌ ಕೆನಡಾ(ದೇಶದ ರಾಷ್ಟ್ರೀಯ ಅಂಕಿಅಂಶಗಳ ಕಚೇರಿ) ಅಂಕಿ–ಅಂಶದ ಪ್ರಕಾರ 2019–2021ರ ನಡುವೆ ಕೆನಡಾದಲ್ಲಿ ಧರ್ಮ, ಲೈಂಗಿಕ ದೌರ್ಜನ್ಯ, ಜನಾಂಗೀಯ ದ್ವೇಷಗಳಂತಹ ಅಪರಾಧಗಳ ಸಂಖ್ಯೆಯ‌ಲ್ಲಿ ಶೇಕಡಾ 72ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.