ವಿಶ್ವಸಂಸ್ಥೆ: ಪಾಕಿಸ್ತಾನೀಯರ ದಬ್ಬಾಳಿಕೆ ಕೊನೆಗೊಳಿಸಲು ಬಲೂಚಿಸ್ತಾನ ಹೆಣಗಾಡುತ್ತಿದೆ ಎಂದು ಹೋರಾಟಗಾರ, ಬಲೂಚ್ ವಾಯ್ಸ್ ಅಸೋಸಿಯೇಷನ್ನ ಅಧ್ಯಕ್ಷ ಮುನೀರ್ ಮೆಂಗಲ್ ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಗೆ (ಯುಎನ್ಎಚ್ಆರ್ಸಿ) ತಿಳಿಸಿದ್ದಾರೆ. ನಾಗರಿಕರ ಕಣ್ಮರೆ ಪ್ರಕರಣಗಳನ್ನು ಉಲ್ಲೇಖಿಸಿ ಅವರು ಈ ಮಾಹಿತಿ ನೀಡಿದ್ದಾರೆ.
ಯುಎನ್ಎಚ್ಆರ್ಸಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನೀಯರ ದಬ್ಬಾಳಿಕೆ, ನಿಗ್ರಹ ಮತ್ತು ಬಲವಂತದದಿಂದ ತಪ್ಪಿಸಿಕೊಳ್ಳಲು ಬಲೂಚಿಸ್ತಾನದವರು ಹೆಣಗಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಬಲೂಚಿಸ್ತಾನದಿಂದ ನಾಪತ್ತೆಯಾದವರ ಕುರಿತು ವಾಯ್ಸ್ ಆಫ್ ಬಲೂಚ್ ಮಿಸ್ಸಿಂಗ್ ಪರ್ಸನ್ಸ್ (ವಿಬಿಎಂಪಿ) ಸ್ವಯಂಸೇವಾ ಸಂಸ್ಥೆ ಸಿದ್ಧಪಡಿಸಿರುವ ದತ್ತಾಂಶಗಳ ವಿಸ್ತೃತ ಮಾಹಿತಿಯನ್ನೂ ಹಂಚಿಕೊಂಡ ಅವರು, ಇಂಥ ವ್ಯವಸ್ಥಿತ, ಬಲವಂತದ ನಾಪತ್ತೆ ಪ್ರಕರಣಗಳನ್ನು ತಡೆಯಲು ಯುಎನ್ಎಚ್ಆರ್ಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ವಿಬಿಎಂಪಿ ಮಾಹಿತಿ ಪ್ರಕಾರ, ಜೂನ್ – ಆಗಸ್ಟ್ ಅವಧಿಯಲ್ಲಿ 57ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಪೈಕಿ 12 ಮಹಿಳೆಯರು, ಏಳು ವರ್ಷ ವಯಸ್ಸಿನೊಳಗಣ 4 ಮಕ್ಕಳೂ ಇದ್ದಾರೆ. ಗುಂಡಿನ ದಾಳಿ, ಹತ್ಯೆಯಂಥ ಕೃತ್ಯಗಳು ನಡೆಯುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನೀಯರ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗಿದೆ ಎಂದು ಮುನೀರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.