ADVERTISEMENT

ಬಾಂಗ್ಲಾದೇಶ: ಶೇ 56ರಷ್ಟು ವೇತನ ಹೆಚ್ಚಳ ತಿರಸ್ಕರಿಸಿದ ಗಾರ್ಮೆಂಟ್ಸ್ ಕಾರ್ಮಿಕರು

ಏಜೆನ್ಸೀಸ್
Published 7 ನವೆಂಬರ್ 2023, 13:17 IST
Last Updated 7 ನವೆಂಬರ್ 2023, 13:17 IST
<div class="paragraphs"><p>ಬಾಂಗ್ಲಾದೇಶ ಡಾಕಾದಲ್ಲಿರುವ ಗಾರ್ಮೆಂಟ್ ಘಟಕದಲ್ಲಿ ದುಡಿಯುತ್ತಿರುವ ಮಹಿಳೆಯರು (ಸಾಂದರ್ಭಿಕ ಚಿತ್ರ)</p></div>

ಬಾಂಗ್ಲಾದೇಶ ಡಾಕಾದಲ್ಲಿರುವ ಗಾರ್ಮೆಂಟ್ ಘಟಕದಲ್ಲಿ ದುಡಿಯುತ್ತಿರುವ ಮಹಿಳೆಯರು (ಸಾಂದರ್ಭಿಕ ಚಿತ್ರ)

   

  • Close

    ADVERTISEMENT
  • Selecte

ಢಾಕಾ: ಬಾಂಗ್ಲಾದೇಶದಲ್ಲಿರುವ ಸುಮಾರು 40 ಲಕ್ಷ ಗಾರ್ಮೆಂಟ್ ಕಾರ್ಮಿಕರ ಮಾಸಿಕ ಕನಿಷ್ಠ ವೇತನವನ್ನು ಶೇ 56.25ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಈ ಘೋಷಣೆ ಬೆನ್ನಲ್ಲೇ ಕಾರ್ಮಿಕರ ಒಕ್ಕೂಟವು ಅದನ್ನು ತಿರಸ್ಕರಿಸಿದ್ದು, ಮೂರು ಪಟ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ.

ಬಾಂಗ್ಲಾದೇಶದ ಒಟ್ಟು ಉತ್ಪನ್ನದ ರಫ್ತಿನಲ್ಲಿ ಶೇ 85ರಷ್ಟು ಜವಳಿ ಉದ್ಯಮದಿಂದಲೇ ಬರುತ್ತದೆ. ದೇಶದಲ್ಲಿ ಸುಮಾರು 3,500 ಜವಳಿ ಉದ್ಯಮಗಳಿವೆ. ಲಿವೈಸ್‌, ಝಾರಾ, ಎಚ್‌ಅಂಡ್‌ಎಂ ಸೇರಿದಂತೆ ಜಾಗತಿಕ ಮಟ್ಟದ ಪ್ರಮುಖ ಬ್ರಾಂಡ್‌ಗಳು ಬಾಂಗ್ಲಾದೇಶದಲ್ಲಿ ತಯಾರಾಗುತ್ತಿವೆ.

ಈ ಬೃಹತ್ ಉದ್ಯಮದಲ್ಲಿನ ಬಹಳಷ್ಟು ಕಾರ್ಮಿಕರು ಮಹಿಳೆಯರು. ಇವರಿಗೆ ಸದ್ಯ ಮಾಸಿಕ 8,300 ಟಾಕಾ (₹ 6,275) ನೀಡಲಾಗುತ್ತಿದೆ. ಕನಿಷ್ಠ ವೇತನವನ್ನು ಮೂರು ಪಟ್ಟು ಹೆಚ್ಚಿಸಬೇಕು ಎಂದು ಕಾರ್ಮಿಕ ಒಕ್ಕೂಟಗಳು ಬೇಡಿಕೆ ಇಟ್ಟು ಮುಷ್ಕರ ನಡೆಸಿವೆ. ಮುಷ್ಕರ ಹಿಂಸಾಚಾರಕ್ಕೂ ತಿರುಗಿತ್ತು. ಆದರೆ ಕಾರ್ಖಾನೆ ಮಾಲೀಕರು ಶೇ 25ರಷ್ಟು ವೇತನ ಹೆಚ್ಚಳದ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ.

ಸಮಸ್ಯೆ ಬಗೆಹರಿಸಲು ಅಲ್ಲಿನ ಸರ್ಕಾರವು ಆಯೋಗವನ್ನು ರಚಿಸಿತ್ತು. ಇದರಲ್ಲಿ ಒಕ್ಕೂಟದ ಮುಖಂಡರು, ಕಾರ್ಖಾನೆ ಪ್ರತಿನಿಧಿಗಳು ಮತ್ತು ವೇತನ ಪರಿಣಿತರೂ ಇದ್ದರು. ಇದರಿಂದಾಗಿ ಕನಿಷ್ಠ ವೇತವನ್ನು 12,500 ಟಾಕಾ (₹ 9,450) ಗೆ ನಿಗದಿಪಡಿಸಬಹುದು ಎಂದು ಆಯೋಗವು ಶಿಫಾರಸು ಮಾಡಿದೆ. ಆದರೆ ಇದನ್ನು ಒಕ್ಕೂಟಗಳು ತಿರಸ್ಕರಿಸಿವೆ. ಕನಿಷ್ಠ ವೇತವನ್ನು 23 ಸಾವಿರ ಟಾಕಾ (₹17,390)ಗೆ ನಿಗದಿಪಡಿಸುವಂತೆ ಒತ್ತಾಯಿಸಿವೆ. 

‘ದೇಶದಲ್ಲಿ ಏರುಗತಿಯಲ್ಲಿರುವ ಹಣದುಬ್ಬರ ಅಕ್ಟೋಬರ್‌ ತಿಂಗಳಿನಲ್ಲಿ ಶೇ 10ರ ಆಸುಪಾಸಿನಲ್ಲಿತ್ತು. ಅಮೆರಿಕ ಡಾಲರ್‌ ಎದುರು ಟಾಟಾ ಶೇ 30ರಷ್ಟು ಕುಸಿದಿದೆ. ಇದರಿಂದ ಬೆಲೆ ಏರಿಕೆ ಉಂಟಾಗಿದ್ದು, ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಕಾರ್ಮಿಕ ಮುಖಂಡರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಾಂಗ್ಲಾದೇಶದ ಕೈಗಾರಿಕಾ ನಗರಿ ಗಾಝೀಪುರ್‌ನಲ್ಲಿ ಸುಮಾರು ಆರು ಸಾವಿರ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಪೊಲೀಸರು ಅಶ್ರುವಾಯು ಸಿಡಿಸಿ ಕಾರ್ಮಿಕರನ್ನು ಚದುರಿಸಿದ್ದಾರೆ. ವಿದೇಶಗಳ ಹಲವು ಪ್ರಸಿದ್ಧ ಬ್ರಾಂಡ್‌ಗಳ ಉಡುಪುಗಳನ್ನು ಸಿದ್ಧಪಡಿಸುವ ಸುಮಾರು 600ಕ್ಕೂ ಹೆಚ್ಚು ಘಟಕಗಳು ಕಳೆದ ಕೆಲ ವಾರಗಳಿಂದ ಬಾಗಿಲು ಹಾಕಿವೆ. ದಶಕದಲ್ಲೇ ಇದು ಅತ್ಯಂತ ದೊಡ್ಡ ಮಟ್ಟದ ಹೋರಾಟ ಎಂದೆನ್ನಲಾಗಿದೆ.

ಘಟನೆಯಲ್ಲಿ ನಾಲ್ಕು ಕಾರ್ಖಾನೆಗಳಿಗೆ ಬೆಂಕಿ ಹಾಕಲಾಗಿದೆ. ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹೆದ್ದಾರಿಯಲ್ಲಿ ಧರಣಿ ನಡೆಸಿದ್ದಾರೆ. ಪ್ರಮುಖ ಬ್ರಾಂಡ್‌ಗಳಾದ ಲಿವಿ ಸ್ಟ್ರಾಸ್‌, ಲುಲುಲೆಮನ್, ಪ್ಯಾಟಗೊನಿಯಾ ಕಂಪನಿಗಳು ಪ್ರಧಾನಿ ಶೇಖ್ ಹಸೀನಾ ಅವರಿಗೆ ಕರೆ ಮಾಡಿ, ಮಾತುಕತೆ ಯಶಸ್ವಿಯಾಗುವಂತೆ ಪೂರ್ಣಗೊಳಿಸುವಂತೆ ಕೋರಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.