
ಬಾಂಗ್ಲಾದೇಶ ಧ್ವಜ
– ಪಿಟಿಐ ಚಿತ್ರ
ಢಾಕಾ: ದೀಪು ಚಂದ್ರದಾಸ್ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜನರು ಥಳಿಸಿ ಕೊಂದಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಅಮೃತ್ ಮೊಂಡಲ್ ಅಲಿಯಾಸ್ ಸಾಮ್ರಾಟ್ (29) ಎಂದು ಗುರುತಿಸಲಾಗಿದ್ದು, ಬುಧವಾರ ರಾತ್ರಿ 11 ಗಂಟೆ ಸಮಯದಲ್ಲಿ ರಾಜ್ಬಾರಿಯ ಪಾಂಗ್ಶಾ ಎಂಬಲ್ಲಿ ಈತನ ಹತ್ಯೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಮೃತ ವ್ಯಕ್ತಿ ಅಮೃತ್, ಕಾಳಿಮೊಹರ್ ಬಳಿಯ ಹೊಸೇನ್ದಂಗಾ ಗ್ರಾಮದವನಾಗಿದ್ದು, ‘ಸಾಮ್ರಾಟ್ ವಾಹಿನಿ’ ಎಂಬ ಸುಲಿಗೆಕೋರರ ತಂಡಕ್ಕೆ ನಾಯಕನಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೇ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಪತನವಾದ ಬಳಿಕ ಅಮೃತ್ ದೇಶ ತೊರೆದಿದ್ದ. ಇತ್ತೀಚೆಗಷ್ಟೇ ಗ್ರಾಮಕ್ಕೆ ಹಿಂತಿರುಗಿದ್ದ ಎಂದು ಮಾಹಿತಿ ನೀಡಿದ್ದಾರೆ.
ಬುಧವಾರ ರಾತ್ರಿ ಶಾಹಿದುಲ್ ಇಸ್ಲಾಂ ಎನ್ನುವವರ ಮನೆಗೆ ಅಮೃತ್ ಮತ್ತು ಆತನ ತಂಡ ಹಣ ಸುಲಿಗೆ ಮಾಡಲು ತೆರಳಿತ್ತು. ಈ ವೇಳೆ ಕುಟುಂಬಸ್ಥರು ಜೋರಾಗಿ ಕೂಗಾಡಿದ ಪರಿಣಾಮ ಇತರೆ ಗ್ರಾಮಸ್ಥರು ಅಮೃತ್ ಮತ್ತು ಆತನ ಸಂಗಡಿಗರ ಬೆನ್ನತ್ತಿದ್ದಾರೆ. ಈ ವೇಳೆ ತಂಡದ ಇತರೆ ಸದಸ್ಯರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದು, ಅಮೃತ್ ಸಿಕ್ಕಿಬಿದ್ದಿದ್ದ. ಆಗ ಜನರು ಅಮೃತ್ನನ್ನು ತೀವ್ರವಾಗಿ ಥಳಿಸಿದ್ದಾರೆ. ಪೊಲೀಸರು ಈತನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಮೃತ್ನ ಸಂಗಡಿಗ ಮೊಹಮ್ಮದ್ ಸಲೀಮ್ ಎಂಬಾತನನ್ನು ಬಂಧಿಸಲಾಗಿದ್ದು, ಆತನದಿಂದ ಪಿಸ್ತೂಲು ಮತ್ತು ಗನ್ ವಶಪಡಿಸಿಕೊಳ್ಳಲಾಗಿದೆ.