ಢಾಕಾ): ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ನಿವಾಸವನ್ನು ಪ್ರತಿಭಟನಕಾರರು ಗುರುವಾರ ಧ್ವಂಸಗೊಳಿಸಿದ್ದಾರೆ.
ಈ ಕಟ್ಟಡವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗಿತ್ತು.
ಶೇಖ್ ಹಸೀನಾ ಅವರು ಫೇಸ್ಬುಕ್ ಮೂಲಕ ಬುಧವಾರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇದನ್ನು ಪ್ರತಿಭಟಿಸಿ, ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಚಳವಳಿ (ಎಡಿಎಸ್ಎಂ) ಸಂಚಾಲಕ ಹಸ್ನತ್ ಅಬ್ದುಲ್ಲಾ ಅವರು ಪ್ರತಿಭಟನೆಗೆ ಕರೆ ನೀಡಿದ್ದರು.
ತಕ್ಷಣವೇ, ಸುತ್ತಿಗೆಗಳೊಂದಿಗೆ ‘ಧನ್ಮಂಡಿ’ ಪ್ರದೇಶದಲ್ಲಿರುವ ಮುಜಿಬುರ್ ರೆಹಮಾನ್ ಅವರ ನಿವಾಸದತ್ತ ಸಾವಿರಾರು ಸಂಖ್ಯೆಯಲ್ಲಿ ನುಗ್ಗಿದ ಪ್ರತಿಭಟನಕಾರರು, ಧ್ವಂಸಗೊಳಿಸಲು ಮುಂದಾದರು. ಮನೆಯೊಳಗೆ ನುಗ್ಗಿ ರೆಹಮಾನ್ ಕಲಾಕೃತಿಗಳನ್ನು ನಾಶಗೊಳಿಸಿದರು.
ಬಳಿಕ ಬುಲ್ಡೋಜರ್ನಿಂದ ಮನೆಯನ್ನು ಕೆಡವಿಹಾಕುವ ಕೆಲಸ ಆರಂಭಿಸಿದರು. ಭಾರಿ ಯಂತ್ರಗಳನ್ನು ಬಳಸಿಕೊಂಡು, ಗುರುವಾರವೂ ಮನೆಯನ್ನು ನಾಶಮಾಡುವ ಕಾರ್ಯ ನಡೆಯಿತು.
ಮನೆ ಧ್ವಂಸಗೊಳಿಸಿದ ಬಳಿಕ, ‘ದೆಹಲಿ ಅಥವಾ ಢಾಕಾ’... ಢಾಕಾ, ಢಾಕಾ, ಢಾಕಾ.. ಮುಜಿಬಿಸಂ ಕೊನೆಯಾಗಿದೆ’ ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು.
ಯಾರ್ಯಾರ ಮನೆಗಳು ಧ್ವಂಸ
*ಶೇಖ್ ಹಸೀನಾ ಅವರ ನಿವಾಸ ‘ಸುಧಾ ಸದನ್’
*ಹಸೀನಾ ಅವರ ಸಂಬಂಧಿಗಳಾದ ಶೇಕ್ ಹೆಲಾಲ್ ಉದ್ದೀನ್ ಹಾಗೂ ಶೇಕ್ ಸಲಾವುದ್ದೀನ್ ಜುವೆಲ್ ನಿವಾಸಗಳು
*ಢಾಕಾದ ಮಾಜಿ ಮೇಯರ್ ಸೆರ್ನಿಯಾಬತ್ ಸಾದಿಕ್ ಅಬ್ದುಲ್ಲಾ ನಿವಾಸ
*ಅವಾಮಿ ಲೀಗ್ನ ಜಂಟಿ ಕಾರ್ಯದರ್ಶಿಗಳಾದ ಮಹ್ಬುದುಲ್ ಆಲಂ ಹನೀಫ್, ಕುಸ್ತಿಯಾ ಅವಾಮಿ ಲೀಗ್ನ ಅಧ್ಯಕ್ಷ ಸಾದರ್ ಖಾನ್ ನಿವಾಸಗಳು
ಭಾವಚಿತ್ರಗಳಿಗೂ ಹಾನಿ
*ಢಾಕಾ ವಿ.ವಿಯ ‘ಬಂಗಬಂಧು ಶೇಕ್ ಮುಜಿಬುರ್ ರೆಹಮಾನ್’ ಸಭಾಂಗಣದ ನಾಮಫಲಕವನ್ನು ಕಿತ್ತೆಸೆದಿದ್ದಾರೆ
*ಚಿತ್ತಗಾಂಗ್ನ ವೈದ್ಯಕೀಯ ಕಾಲೇಜು ಹಾಗೂ ರಂಗ್ಪುರ್ನ ಬೇಗಂ ರೊಕೆಯಾ ವಿಶ್ವವಿದ್ಯಾಲಯಲ್ಲಿಟ್ಟಿದ್ದ ಶೇಖ್ ಮುಜಿಬುರ್ ಭಾವಚಿತ್ರಕ್ಕೆ ಹಾನಿ
*ಮೈಮನ್ಸಿಂಹ ಜಿಲ್ಲೆಯ ಸರ್ಕೀಟ್ ಹೌಸ್ನ ಮುಜಿಬುರ್ ರೆಹಮಾನ್ ಕಲಾಕೃತಿ ಧ್ವಂಸ
*ತ್ರಿಶಾಲ್ನ ಕವಿ ಖಾಜಿ ನಜ್ರುಲ್ ಇಸ್ಲಾಂ ವಿಶ್ವವಿದ್ಯಾಲಯ ‘ಮುಜಿಬುರ್’ ಕಲಾಕೃತಿ ನಾಶ
*ಚುಆಡಾಂಗಾ ಉಪ ಆಯುಕ್ತರ ಕಚೇರಿಯಲ್ಲಿದ್ದ ಮುಜಿಬುರ್ ಹಾಗೂ ಅವರ ಪತ್ನಿ ಫಾಜಿಲ್ ಅವರ ಕಲಾಕೃತಿಗೂ ಹಾನಿ
ಹೆಚ್ಚಿನ ಮಾಹಿತಿಯಿಲ್ಲ: ‘ಫೇಸ್ಬುಕ್ ಮೂಲಕ ಮನೆ ಧ್ವಂಸಗೊಳಿಸಿದ ಸುದ್ದಿ ನೋಡಿದ್ದೇನೆ. ಇದರ ಹೊರತಾಗಿ ಹೆಚ್ಚಿನ ಮಾಹಿತಿಯಿಲ್ಲ’ ಎಂದು ಖುಲಾನಾ ಮೆಟ್ರೊಪಾಲಿಟಿನ್ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಅಹ್ಸಾನ್ ಹಬೀಬ್ ತಿಳಿಸಿದರು.
Highlights - ಢಾಕಾದಲ್ಲಿ ಮತ್ತೆ ಬೀದಿಗಿಳಿದ ವಿದ್ಯಾರ್ಥಿ ಪ್ರತಿಭಟನಕಾರರು ಬುಲ್ಡೋಜರ್ಗಳ ಮೆರವಣಿಗೆ– ಹಸೀನಾ, ಸಂಬಂಧಿಕರ ಮನೆಗಳೂ ಧ್ವಂಸ
Quote - ಇಂದು ರಾತ್ರಿ ಬಾಂಗ್ಲಾದೇಶವು ಸರ್ವಾಧಿಕಾರಿ ಮನಃಸ್ಥಿತಿಯಿಂದ ಮುಕ್ತವಾಗಿ ಯಾತ್ರಾಸ್ಥಳವಾಗಲಿದೆ ಹಸ್ನತ್ ಅಬ್ದುಲ್ಲಾ ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಚಳವಳಿ (ಎಡಿಎಸ್ಎಂ) ಸಂಚಾಲಕ(ಬುಧವಾರ ರಾತ್ರಿ ನೀಡಿದ್ದ ಕರೆ)
Quote - ಅವರು ಕಟ್ಟಡವನ್ನು ಕೆಡವಬಹುದು ಇತಿಹಾಸವನ್ನಲ್ಲ. ಇತಿಹಾಸವು ಮತ್ತೆ ಪ್ರತೀಕಾರ ತೀರಿಸಿಕೊಳ್ಳಲಿದೆ ಶೇಖ್ ಹಸೀನಾ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ
Cut-off box - ಹಸೀನಾ ಆಕ್ರೋಶ ತಂದೆಯ ಮನೆಯನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಪಕ್ಷದ ವಿದ್ಯಾರ್ಥಿ ಘಟಕ ‘ಛಾತ್ರಾ ಲೀಗ್’ ಉದ್ದೇಶಿಸಿ ಶಾಂತವಾಗಿ ಮಾತನಾಡಿದ ಶೇಖ್ ಹಸೀನಾ ‘ಈಗಿನ ಸರ್ಕಾರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಬೇಕು’ ಎಂದು ಕರೆ ನೀಡಿದರು. ‘ಲಕ್ಷಾಂತರ ಮಂದಿ ಬಲಿದಾನದಿಂದ ಪಡೆದುಕೊಂಡ ದೇಶದ ಧ್ವಜ ಸಂವಿಧಾನವನ್ನು ನಾಶಗೊಳಿಸುವ ಧೈರ್ಯ ಅವರಿಗಿನ್ನೂ ಬಂದಿಲ್ಲ. ಈಗ ಹುತಾತ್ಮರ ಮನೆಗಳನ್ನು ಧ್ವಂಸಗೊಳಿಸಿದ್ದಾರೆ’ ಎಂದರು. ‘ಅವರು ಇಂದು ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ಯಾವ ಅಪರಾಧಕ್ಕಾಗಿ ಹೀಗೆ ಮಾಡಿದ್ದು..? ಆ ಮನೆಗಳನ್ನು ನೋಡಿ ಪ್ರತಿಭಟನಕಾರರು ಏಕೆ ಹೆದರಿದರು..? ನಾನು ಈ ವಿಷಯಕ್ಕಾಗಿ ಜನರಿಂದ ನ್ಯಾಯ ನಿರೀಕ್ಷಿಸುತ್ತಿದ್ದೇನೆ. ನಾನು ನಿಮಗಾಗಿ ಏನೂ ಮಾಡಿಲ್ಲವೇ..? ಎಂದು ಅವರು ದೇಶದ ಜನತೆಯನ್ನು ಪ್ರಶ್ನಿಸಿದ್ದಾರೆ.
Cut-off box - ಭಾರತದ ವಿರುದ್ಧ ಬಾಂಗ್ಲಾ ಅಸಮಾಧಾನ ಢಾಕಾ (ಪಿಟಿಐ): ಪದಚ್ಯುತಗೊಂಡು ಭಾರತದಲ್ಲಿ ನೆಲಸಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ‘ಸುಳ್ಳು ಹಾಗೂ ಕಪೋಲಕಲ್ಪಿತ’ ಹೇಳಿಕೆ ನೀಡುತ್ತಿದ್ದಾರೆ ಎಂದು ಬಾಂಗ್ಲಾದೇಶವು ಪ್ರತಿಭಟನೆ ದಾಖಲಿಸಿದೆ. ಸಾಮಾಜಿಕ ಮಾಧ್ಯಮದ ಮೂಲಕ ಬುಧವಾರ ರಾತ್ರಿ ಶೇಖ್ ಹಸೀನಾ ಭಾಷಣ ಮಾಡಿ ಮಧ್ಯಂತರ ಸರ್ಕಾರದ ವಿರುದ್ಧ ಪ್ರತಿರೋಧ ದಾಖಲಿಸಬೇಕು ಎಂದು ದೇಶದ ಜನತೆಗೆ ಕರೆ ನೀಡಿದ್ದರು. ‘ಬಾಂಗ್ಲಾದೇಶದಲ್ಲಿ ಅಸ್ಥಿರತೆಗಾಗಿ ಶೇಖ್ ಹಸೀನಾ ಅವರು ನಿರಂತರ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು ಈ ಕುರಿತು ಭಾರತಕ್ಕೆ ತನ್ನ ಪ್ರಬಲ ಪ್ರತಿಭಟನೆಯನ್ನು ದಾಖಲಿಸಲಾಗಿದೆ’ ಎಂದು ಇಲ್ಲಿನ ವಿದೇಶಾಂಗ ಇಲಾಖೆಯು ಹೇಳಿಕೆ ನೀಡಿದೆ. ಪ್ರತಿಭಟನಾ ಹೇಳಿಕೆಯನ್ನು ಢಾಕಾದಲ್ಲಿರುವ ಭಾರತದ ಹಂಗಾಮಿ ಹೈ ಕಮಿಷನರ್ಗೆ ಹಸ್ತಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.