ADVERTISEMENT

ಬಾಂಗ್ಲಾ: ಮೋದಿ ವಿರುದ್ಧ ನಿಲ್ಲದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 19:30 IST
Last Updated 28 ಮಾರ್ಚ್ 2021, 19:30 IST
ಪ್ರತಿಭಟನೆಯ ಭಾಗವಾಗಿ ರಸ್ತೆ ತಡೆಯನ್ನೂ ನಡೆಸಲಾಗಿದೆಎಎಫ್‌ಪಿ ಚಿತ್ರ
ಪ್ರತಿಭಟನೆಯ ಭಾಗವಾಗಿ ರಸ್ತೆ ತಡೆಯನ್ನೂ ನಡೆಸಲಾಗಿದೆಎಎಫ್‌ಪಿ ಚಿತ್ರ   

ನಾರಾಯಣಗಂಜ್ (ಬಾಂಗ್ಲಾದೇಶ) (ಎಪಿ/ಎಎಫ್‌ಪಿ): ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ಇಲ್ಲಿ ಆರಂಭವಾಗಿದ್ದ ಪ್ರತಿಭಟನೆ ಮೂರನೇ ದಿನವೂ ಮುಂದುವರಿದೆ. ಢಾಕಾ ಹೊರವಲಯದ ನಾರಾಯಣಗಂಜ್‌ನಲ್ಲಿ ಭಾನುವಾರ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರ ಜತೆ ನಡೆದ ಘರ್ಷಣೆಯಲ್ಲಿ ಒಬ್ಬ ಯುವಕ ಮೃತಪಟ್ಟಿದ್ದಾನೆ. ಹಲವರು ಗಾಯಗೊಂಡಿದ್ದಾರೆ.

ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿರುವುದಕ್ಕೆ ಹಲವು ಮಾನವ ಹಕ್ಕು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಮೋದಿ ಅವರು ಭೇಟಿ ನೀಡುವುದನ್ನು ವಿರೋಧಿಸಿ ಇಲ್ಲಿನ, ಹಿಫಾಜತ್ ಇ ಇಸ್ಲಾಮಿ ಸಂಘಟನೆಯು ಪ್ರತಿಭಟನೆ ನಡೆಸುತ್ತಿದೆ. ಢಾಕಾದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆದಿತ್ತು. ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಶನಿವಾರದ ಪ್ರತಿಭಟನೆ ವೇಳೆ ಆರು ಜನರು ಮೃತಪಟ್ಟಿದ್ದರು. ಈಗ ಮೋದಿ ಅವರು ವಾಪಸಾದ ನಂತರವೂ, ಇಲ್ಲಿ ಪ್ರತಿಭಟನೆ ಮುಂದುವರಿದಿದೆ.

ADVERTISEMENT

‘ಮೋದಿ ಅವರು ತಮ್ಮ ದೇಶದಲ್ಲಿ ಕೋಮುಭಾವನೆ ಹುಟ್ಟುಹಾಕುತ್ತಿದ್ದಾರೆ. ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುತ್ತಿದ್ದಾರೆ. ಜನರನ್ನು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವವರು ನಮ್ಮ ದೇಶಕ್ಕೆ ಬರಬಾರದು’ ಎಂದು ಸಂಘಟನೆ ಹೇಳಿದೆ. ನಾರಾಯಣಗಂಜ್‌ನಲ್ಲಿ ಭಾನುವಾರ, ಸಂಘಟನೆಯ 3,000ಕ್ಕೂ ಹೆಚ್ಚು ಸದಸ್ಯರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.