ವಾಷಿಂಗ್ಟನ್ (ಪಿಟಿಐ): ಭಾರತದಲ್ಲಿ 1984ರ ಸಿಖ್ ವಿರೋಧಿ ಹಿಂಸಾಚಾರವನ್ನು ಖಂಡಿಸಬೇಕು ಹಾಗೂ ಆ ದುಷ್ಕೃತ್ಯವನ್ನು ನರಮೇಧ ಎಂಬುದಾಗಿ ಪರಿಗಣಿಸಬೇಕು ಎಂದು ಕ್ಯಾಲಿಫೋರ್ನಿಯಾ ರಾಜ್ಯ ಅಸೆಂಬ್ಲಿಯು ಅಮೆರಿಕ ಸಂಸತ್ ಅನ್ನು ಒತ್ತಾಯಿಸುವ ನಿರ್ಣಯ ಅಂಗೀಕರಿಸಿದೆ.
ಶಾಸನಸಭೆಯ ಮೊದಲ ಚುನಾಯಿತ ಸಿಖ್ ಸದಸ್ಯೆ ಜಸ್ಮೀತ್ ಕೌರ್ ಬೈನ್ಸ್ ಅವರು ಮಾರ್ಚ್ 22 ರಂದು ಈ ನಿರ್ಣಯ ಮಂಡಿಸಿದರು ಮತ್ತು ಸೋಮವಾರ ಇದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಗಲಭೆಯ ದೈಹಿಕ ಮತ್ತು ಮಾನಸಿಕ ಆಘಾತದಿಂದ ಅಮೆರಿಕದಲ್ಲಿರುವ ಸಿಖ್ ಸಮುದಾಯ ಚೇತರಿಸಿಕೊಂಡಿಲ್ಲ. ಸಿಖ್ ವಿರೋಧಿ ಹಿಂಸಾಚಾರವನ್ನು ನರಮೇಧ ಎಂಬುದಾಗಿ ಪರಿಗಣಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.
ನರಮೇಧ ನಡೆದ ಸಂದರ್ಭದಲ್ಲಿ ವಿಧವೆಯರಾದ ಹಲವು ಮಹಿಳೆಯರು ಈಗಲೂ ನವದೆಹಲಿಯ ಕಾಲೊನಿಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಮೇಲೆ ಹಲ್ಲೆ, ಅತ್ಯಾಚಾರ ನಡೆದಿತ್ತು ಮತ್ತು ಅವರಿಗೆ ಚಿತ್ರಹಿಂಸೆ ನೀಡಲಾಗಿತ್ತು. ಈ ಮಹಿಳೆಯರು ಅವರ ಕುಟುಂಬಗಳ ವಿರುದ್ಧ ನಡೆದ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದರು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಈಗಲೂ ಒತ್ತಾಯಿಸುತ್ತಿದ್ದಾರೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.