ಬೀಜಿಂಗ್: ಕೋವಿಡ್–19 ವೈರಸ್ ಸೋಂಕಿನಿಂದ ಕಂಗೆಟ್ಟಿರುವ ಚೀನಾ ಇದೇ ಮೊದಲ ಬಾರಿಗೆ, ವಾರ್ಷಿಕ ಸಂಸತ್ ಅಧಿವೇಶನವನ್ನು ಮುಂದೂಡಲು ನಿರ್ಧರಿಸಿದೆ.
ಈ ಕುರಿತು ಚೀನಾದ ಅತ್ಯುನ್ನತ ಶಾಸಕಾಂಗವಾಗಿರುವ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ (ಎನ್ಪಿಸಿ) ಸ್ಥಾಯಿ ಸಮಿತಿ ಸಭೆ ಸೇರಿ ಕರಡು ನಿರ್ಣಯವನ್ನು ಅಂಗೀಕರಿಸಿತು ಎಂದು ಸರ್ಕಾರಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ರೀತಿ ಅಧಿವೇಶನ ಮುಂದೂಡಿತ್ತಿರುವುದು ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿ ಎಂದು ಚೀನಾದ ರಾಜಕೀಯ ತಜ್ಞರು ಹೇಳಿದ್ದಾರೆ.
13ನೇ ಎನ್ಪಿಸಿಯ ಮೂರನೇ ವಾರ್ಷಿಕ ಅಧಿವೇಶನ ಮಾರ್ಚ್ 5ರಿಂದ ಬೀಜಿಂಗ್ನಲ್ಲಿ ಆರಂಭವಾಗಬೇಕಿತ್ತು. ಸಾಮಾನ್ಯವಾಗಿ ಎರಡು ವಾರ ನಡೆಯುವ ಅಧಿವೇಶನದಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ವಾರ್ಷಿಕ
ಅಧಿವೇಶನದಲ್ಲಿ ತನ್ನ ರಾಜಕೀಯ ಪ್ರಾಬಲ್ಯವನ್ನು ಪ್ರದರ್ಶಿಸುತ್ತದೆ.
‘ಅನುಮತಿಗೆ ಮಾತುಕತೆ ನಡೆಯುತ್ತಿದೆ’
‘ಭಾರತೀಯ ವಾಯುಪಡೆಯ ವಿಶೇಷ ವಿಮಾನಕ್ಕೆ ಅನುಮತಿ ನೀಡುವಲ್ಲಿ ವಿಳಂಬವಾಗುತ್ತಿರುವ ಕುರಿತು ಚೀನಾ ಹಾಗೂ ಭಾರತೀಯ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ’ ಎಂದು ಚೀನಾ ಸೋಮವಾರ ಹೇಳಿದೆ.
ವುಹಾನ್ಗೆ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡಲು ಹಾಗೂ ಅಲ್ಲಿರುವ 100ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕರೆತರಲು ವಾಯುಪಡೆಯ ಅತಿದೊಡ್ಡ ವಿಮಾನ ಸಿ–17 ಗ್ಲೋಬ್ಮಾಸ್ಟರ್ ಅನ್ನು ಕಳುಹಿಸುವುದಾಗಿ ಭಾರತ ಘೋಷಿಸಿದೆ. ಅಲ್ಲದೆ ವಿಮಾನದಲ್ಲಿ ಸ್ಥಳಾವಕಾಶ ಇದ್ದರೆ, ಚೀನಾದಲ್ಲಿರುವ ಬೇರೆ ದೇಶಗಳ ಪ್ರಜೆಗಳನ್ನು ಸಹ ಅಲ್ಲಿಂದ ಸ್ಥಳಾಂತರಗೊಳಿಸಲು ನೆರವು ನೀಡುವುದಾಗಿ ಹೇಳಿದೆ. ಲ್ಯಾಂಡಿಂಗ್ಗೆ ಅನುಮತಿ ದೊರಕದೆ ಇರುವುದರಿಂದ, ವಿಮಾನ ಕಳುಹಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಭಾರತೀಯ ಅಧಿಕಾರಿಗಳು ಈಚೆಗೆ ಹೇಳಿದ್ದರು.
‘ವನ್ಯಜೀವಿಗಳ ಸೇವನೆಗೆ ನಿರ್ಬಂಧ’
ಬೀಜಿಂಗ್ (ಎಎಫ್ಪಿ): ಕೋವಿಡ್–19 ವೈರಸ್ ಸೋಂಕು ಹರಡಲು ವನ್ಯಜೀವಿಗಳ ಸೇವನೆಯೇ ಕಾರಣ ಎಂದು ನಂಬಲಾಗಿದ್ದು, ಇದರ ಹಿನ್ನೆಲೆಯಲ್ಲಿ ಚೀನಾ ವನ್ಯಜೀವಿಗಳ ಸೇವನೆ ಹಾಗೂ ಅಕ್ರಮ ವ್ಯಾಪಾರವನ್ನು ಸಂಪೂರ್ಣ ನಿಷೇಧಿಸಿದೆ.
ಸೋಮವಾರ ಸಭೆ ಸೇರಿದ ಎನ್ಪಿಸಿ ಸಮಿತಿ ಈ ಸಂಬಂಧದ ಪ್ರಸ್ತಾವನೆಯನ್ನು ಅಂಗೀಕರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.