ವಿಶ್ವಸಂಸ್ಥೆ: ‘ಯುದ್ಧಪೀಡಿತ ಉಕ್ರೇನ್ನ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಅನುಕೂಲವಾಗುವಂತೆ ಸುರಕ್ಷಿತ ಕಾರಿಡಾರ್ ಒದಗಿಸುವಂತೆ ಹಲವು ಬಾರಿ ಒತ್ತಾಯಿಸಲಾಗಿದ್ದರೂ, ಫಲಪ್ರದವಾಗಿಲ್ಲ’ ಎಂದು ವಿಶ್ವಸಂಸ್ಥೆಯ ಭದ್ರತಾಮಂಡಳಿ ಸಭೆಯಲ್ಲಿ ಭಾರತ ಕಳವಳ ವ್ಯಕ್ತಪಡಿಸಿದೆ.
‘ಯುದ್ಧಪೀಡಿತ ಪ್ರದೇಶಗಳಿಂದ ಈ ವರೆಗೆ 20 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ. ಉಳಿದವರ ತೆರವಿಗಾಗಿ ರಷ್ಯಾ ಹಾಗೂ ಉಕ್ರೇನ್ಗೆ ಪದೇಪದೇ ಮನವಿ ಮಾಡಲಾಗಿದ್ದರೂ, ಸುರಕ್ಷಿತ ಕಾರಿಡಾರ್ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.
‘ಮಾನವೀಯ ಕಾರಿಡಾರ್ ಒದಗಿಸುವ ವಿಷಯವನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸಬಾರದು. ಮಾನವೀಯ ನೆರವು, ತಟಸ್ಥ ಧೋರಣೆ, ನಿಷ್ಪಕ್ಷಪಾತ ಹಾಗೂ ಸ್ವಾತಂತ್ರ್ಯದಂತಹ ತತ್ವಗಳೇ ಈ ಕಾರ್ಯಕ್ಕೆ ಮಾರ್ಗದರ್ಶಿಸೂತ್ರಗಳಾಗಬೇಕು’ ಎಂದೂ ಅವರು ಪ್ರತಿಪಾದಿಸಿದರು.
‘ಕೇವಲ ಭಾರತೀಯರಷ್ಟೇ ಅಲ್ಲ, ಸಹಾಯ ಯಾಚಿಸಿದ ಬೇರೆ ದೇಶಗಳ ಪ್ರಜೆಗಳಿಗೂ ಸಹ ಭಾರತ ಸ್ಪಂದಿಸಿದೆ. ಬರುವ ದಿನಗಳಲ್ಲಿ ಇಂಥ ಸ್ಪಂದನೆ ಮುಂದುವರಿಯುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.