ADVERTISEMENT

ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಮಾತುಕತೆ, ರಾಜತಾಂತ್ರಿಕತೆ ಉತ್ತಮ ಮಾರ್ಗ: ಭಾರತ

ಪಿಟಿಐ
Published 25 ಫೆಬ್ರುವರಿ 2022, 7:14 IST
Last Updated 25 ಫೆಬ್ರುವರಿ 2022, 7:14 IST
ವಿದೇಶಾಂಗ ಸಚಿವ ಎಸ್ ಜೈ ಶಂಕರ್
ವಿದೇಶಾಂಗ ಸಚಿವ ಎಸ್ ಜೈ ಶಂಕರ್   

ನವದೆಹಲಿ: ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲವ್ರೊವ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಜೊತೆ ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ದೂರವಾಣಿ ಮೂಲಕ ಪ್ರತ್ಯೇಕ ಮಾತುಕತೆ ನಡೆಸಿದ್ದು, ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ರಾಜತಾಂತ್ರಿಕತೆ ಮತ್ತು ಮಾತುಕತೆ ಅತ್ಯುತ್ತಮ ಮಾರ್ಗಗಳು ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

‘ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲವ್ರೊವ್ ಜೊತೆ ಉಕ್ರೇನ್ ಬೆಳವಣಿಗೆ ಕುರಿತಂತೆ ಮಾತುಕತೆ ನಡೆಸಿದೆ. ರಾಜತಾಂತ್ರಿಕತೆ ಮತ್ತು ಮಾತುಕತೆ ಬಿಕ್ಕಟ್ಟು ಶಮನಕ್ಕೆ ಅತ್ಯುತ್ತಮ ಮಾರ್ಗಗಳೆಂದು ಒತ್ತಿ ಹೇಳಿದ್ದೇನೆ’ಎಂದು ಅವರು ಹೇಳಿದ್ದಾರೆ.

ಇದೇವೇಳೆ, ಉಕ್ರೇನ್‌ನಿಂದ 16,000 ಭಾರತೀಯರ ಸುರಕ್ಷಿತ ಸ್ಥಳಾಂತರದ ಬಗ್ಗೆ ಜೈ ಶಂಕರ್ ಪ್ರಸ್ತಾಪಿಸಿದ್ದಾರೆ.

ADVERTISEMENT

ಮತ್ತೊಂದು ಟ್ವೀಟ್‌ನಲ್ಲಿ, ಅಮೆರಿಕದ ವಿದೇಶಾಂಗ ಸಚಿವ ಬ್ಲಿಂಕೆನ್ ಜೊತೆಗಿನ ಮಾತುಕತೆ ಬಗ್ಗೆ ತಿಳಿಸಿದ್ದಾರೆ.

‘ತಮಗೆ ಕರೆ ಮಾಡಿದ್ದಕ್ಕಾಗಿ ಬ್ಲಿಂಕೆನ್ ಅವರನ್ನು ಶ್ಲಾಘಿಸುತ್ತೇನೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳ ಕುರಿತು ಅವರೊಂದಿಗೆ ಚರ್ಚಿಸಲಾಗಿದೆ’ ಎಂದು ಜೈ ಶಂಕರ್ ಹೇಳಿದ್ದಾರೆ.

‘ರಷ್ಯಾದ ಪೂರ್ವಯೋಜಿತ, ಅಪ್ರಚೋದಿತ ಮತ್ತು ಅಸಮರ್ಥನೀಯ’ ದಾಳಿ ಬಗ್ಗೆ ಬ್ಲಿಂಕೆನ್, ಜೈ ಶಂಕರ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

‘ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್, ರಷ್ಯಾದ ಕೃತ್ಯವನ್ನು ಖಂಡಿಸುವ ಮತ್ತು ಶೀಘ್ರ ಮಿಲಿಟರಿಯನ್ನು ಹಿಂಪಡೆದು ಯುದ್ಧ ವಿರಾಮ ಘೋಷಣೆಗೆ ಒತ್ತಾಯಿಸುವಲ್ಲಿ ಬಲಿಷ್ಠ ಸಾಮೂಹಿಕ ಪ್ರತಿಕ್ರಿಯೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ವಿದೇಶಾಂಗ ವ್ಯವಹಾರಗಳ ಯುರೋಪಿಯನ್ ಒಕ್ಕೂಟದ ಪ್ರತಿನಿಧಿ ಜೋಸೆಫ್ ಬೊರೆಲ್ ಮತ್ತು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಜೊತೆಗೂ ಉಕ್ರೇನ್ ಪರಿಸ್ಥಿತಿ ಬಗ್ಗೆ ಜೈಶಂಕರ್ ಮಾತುಕತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.