ನವದೆಹಲಿ: ರಷ್ಯಾದ ಕಾನೂನು ಬದ್ಧ ಭದ್ರತಾ ಕಾಳಜಿಯನ್ನು ಎಷ್ಟು ಮೆಚ್ಚಿದರೂ ಯುದ್ಧವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಯುದ್ಧ ನಿಲ್ಲಿಸುವಂತೆ ಭಾರತವು ರಷ್ಯಾಕ್ಕೆ ಒತ್ತಾಯಿಸಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಆಗ್ರಹಿಸಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ರಷ್ಯಾಕ್ಕೆ ಭೇಟಿ ನೀಡಿರುವುದು ಸರಿಯಲ್ಲ ಎಂದು ತರೂರ್ ಅವರು ವಾಗ್ದಾಳಿ ನಡೆಸಿದ್ದಾರೆ. 1979 ರಲ್ಲಿ ವಿದೇಶಾಂಗ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ವಿಯೆಟ್ನಾಂ ಮೇಲೆ ಚೀನಾ ದಾಳಿ ನಡೆಸಿದ ಕಾರಣ ಚೀನಾ ಭೇಟಿಯನ್ನು ಮೊಟಕುಗೊಳಿಸಿದ್ದರು ಎಂದು ಉದಾಹರಣೆ ನೀಡಿದ್ದಾರೆ.
‘ಇಮ್ರಾನ್ ಅವರಿಗೆ ಸ್ವಾಭಿಮಾನ ಇದ್ದರೆ ಅವರು ವಾಜಪೇಯಿ ಅವರ ನಡೆಯನ್ನು ಅನುಸರಿಸಿ, ಕೂಡಲೇ ತಮ್ಮ ಪ್ರವಾಸವನ್ನು ಮೊಟಕುಗೊಳಿಸಬೇಕು. ಇಲ್ಲದಿದ್ದರೆ ಅವರೂ ದಾಳಿಯಲ್ಲಿ ಭಾಗಿಯಾದಂತೆ’ ಎಂದಿದ್ದಾರೆ.
‘ರಷ್ಯಾವು ಆಡಳಿತ ಬದಲಾವಣೆ ಕಾರ್ಯಾಚರಣೆ ನಡೆಸುತ್ತಿದೆ. ಇಂತಹ ನಡೆಯನ್ನು ಸದಾ ವಿರೋಧಿಸುತ್ತಿದ್ದ ಭಾರತ ಇನ್ನೆಷ್ಟು ಕಾಲ ಮೌನವಾಗಿರಲು ಸಾಧ್ಯ?’ ಎಂದೂ ತರೂರ್ ಅವರು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.