ಕೊಲಂಬೊ: ದೇಶದಲ್ಲಿ ಅಕ್ರಮ ಸರ್ಕಾರ ಅಸ್ತಿತ್ವದಲ್ಲಿದ್ದು, ಪಕ್ಷದ ಬೆಂಬಲಿಗರ ಫೇಸ್ಬುಕ್ ಮಾಹಿತಿಗಳನ್ನು ರಕ್ಷಿಸುವಂತೆ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್ ಅವರಿಗೆ ಶ್ರೀಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆಪತ್ರ ಬರೆದಿದ್ದಾರೆ.
ಕಳೆದ ತಿಂಗಳು ಲಂಕಾ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಗಳಿಂದ ದ್ವೀಪರಾಷ್ಟ್ರ ಗೊಂದಲದ ಗೂಡಾಗಿದೆ. ಅವಿಶ್ವಾಸ ಗೊತ್ತುವಳಿ ನಿಲುವಳಿ ಮಂಡನೆ ಚರ್ಚೆ ವೇಳೆ ಕಲಾಪದ ವೇಳೆಸಂಸತ್ ಸದಸ್ಯರುಪರಸ್ಪರ ಹೊಡೆದಾಡಿಕೊಂಡಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ, ರಾಜಪಕ್ಸೆ ಆಡಳಿತಕ್ಕೆ ಯಾವುದೇ ಸಹಕಾರ ನೀಡಬಾರದು ಎಂದು ಫೇಸ್ಬುಕ್ ಮುಖ್ಯಸ್ಥ ಜುಕರ್ಬರ್ಗ್ಗೆ ಬರೆದಪತ್ರದಲ್ಲಿ ವಿಕ್ರಮಸಿಂಘೆ ನೇತೃತ್ವದ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ಪಿ) ಪಕ್ಷವು ಒತ್ತಾಯಿಸಿದೆ.
‘ಬಳಕೆದಾರರ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಅಕ್ರಮವಾಗಿ ಅಸ್ತಿತ್ವದಲ್ಲಿರುವ ಸರ್ಕಾರಕ್ಕೆ ನೀಡಬಾರದು, ಇದನ್ನು ಉಲ್ಲಂಘಿಸಿದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ’ ಎಂದು ಯುಎನ್ಪಿ ಎಚ್ಚರಿಸಿದೆ. ಗುರುವಾರ ನಡೆಯಲಿರುವ ಬೃಹತ್ ರ್ಯಾಲಿಗೂ ಮುನ್ನವೇ ಪಕ್ಷದ ಅಧಿಕೃತ ಪೇಜ್ ಸ್ಥಗಿತಗೊಳಿಸಲಾಗಿದೆ ಎಂದು ಇದೇ ವೇಳೆ ದೂರಿದೆ.
ಫೇಸ್ಬುಕ್ ಮೇಲೆ ನಿಷೇಧ: ದ್ವೇಷಪೂರಿತ ಭಾಷಣ ಹಾಗೂ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪದ ಮೇಲೆ ಕಳೆದ ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಫೇಸ್ಬುಕ್ ಜಾಲತಾಣದ ಮೇಲೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಿಷೇಧ ಹೇರಿದ್ದರು.
ಈ ಬೆಳವಣಿಗೆ ಬಳಿಕ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ಮಾಡುವ ದೃಶ್ಯಾವಗಳಿಗಳನ್ನು ಜಾಲತಾಣದಿಂದ ತೆಗೆದುಹಾಕಲು ಹೆಚ್ಚಿನ ಸಿಬ್ಬಂದಿ ನೇಮಕಗೊಳಿಸುವುದಾಗಿ ಫೇಸ್ಬುಕ್ ಭರವಸೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.