ADVERTISEMENT

Boycot India ಅಭಿಯಾನ: ಪ್ರತಿಪಕ್ಷ ನಾಯಕರಿಗೆ ಬಾಂಗ್ಲಾ ಪ್ರಧಾನಿ ಹಸೀನಾ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಏಪ್ರಿಲ್ 2024, 4:15 IST
Last Updated 2 ಏಪ್ರಿಲ್ 2024, 4:15 IST
<div class="paragraphs"><p>&nbsp;ಶೇಖ್ ಹಸೀನಾ</p></div>

 ಶೇಖ್ ಹಸೀನಾ

   

(ಚಿತ್ರ ಕೃಪೆ– ರಾಯಿಟರ್ಸ್ )

ಢಾಕಾ: ಬಾಂಗ್ಲಾದೇಶದಲ್ಲಿ ಭಾರಿ ಸದ್ದು ಮಾಡುತ್ತಿರುವ ಪ್ರತಿಪಕ್ಷ ನಾಯಕರ 'Boycot India' ಅಭಿಯಾನಕ್ಕೆ ಪ್ರಧಾನಿ ಶೇಖ್ ಹಸೀನಾ ತಿರುಗೇಟು ನೀಡಿದ್ದಾರೆ.

ADVERTISEMENT

ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸುವ ಪ್ರತಿಪಕ್ಷದ ನಾಯಕರು ಮೊದಲು ನಿಮ್ಮ ಪತ್ನಿಯರ ಬಳಿಯಿರುವ ಭಾರತದ ಸೀರೆಗಳನ್ನು ಸುಟ್ಟು ಹಾಕಿ ಎಂದು ಸವಾಲೆಸೆದಿದ್ದಾರೆ.

ಆಡಳಿತಾರೂಢ ಅವಾಮಿ ಲೀಗ್​ನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಹಸೀನಾ, ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್​ಪಿ) ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನನ್ನ ಪ್ರಶ್ನೆಯೆಂದರೆ, ನಿಮ್ಮ ಪತ್ನಿಯರು ಎಷ್ಟು ಭಾರತೀಯ ಸೀರೆಗಳನ್ನು ಹೊಂದಿಲ್ಲ?. ಮೊದಲು ನೀವು ಅವರಿಂದ ಸೀರೆಗಳನ್ನು ತೆಗೆದುಕೊಂಡು ಅವುಗಳನ್ನು ಸುಟ್ಟು ಹಾಕಿ. ಬಳಿಕ ಅಭಿಯಾನ ನಡೆಸಿ ಎಂದು ಸವಾಲು ಹಾಕಿದ್ದಾರೆ.

ಬಿಎನ್​ಪಿ ಅಧಿಕಾರದಲ್ಲಿದ್ದಾಗ, ಸಚಿವರು ಹಾಗೂ ‌ಅವರ ಪತ್ನಿಯರು ಭಾರತ ಪ್ರವಾಸ ಮಾಡುತ್ತಿದ್ದರು. ಈ ವೇಳೆ ಅಲ್ಲಿ ಸೀರೆಗಳನ್ನು ಖರೀದಿಸಿ ಬಾಂಗ್ಲಾದಲ್ಲಿ ತಂದು ಮಾರಾಟ ಮಾಡುತ್ತಿದ್ದರು. ಇನ್ನು ಕೆಲವರು ಸೀರೆಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಆದರೆ ಈಗ ಭಾರತ ವಿರೋಧಿ ಘೋಷಣೆ ಕೂಗುತ್ತಿದ್ದಾರೆ. ಭಾರತವನ್ನು ವಿರೋಧ ಮಾಡುವ ನಾಯಕರು ಭಾರತದಿಂದ ತರಿಸಲಾಗುತ್ತಿರುವ ಗರಂ ಮಸಾಲಾ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಸೇರಿದಂತೆ ಮಸಾಲೆ ಪದಾರ್ಥಗಳನ್ನು ತಮ್ಮ ಮನೆಗೆ ತರಬಾರದು ಎಂದು ಹೇಳಿದ್ದಾರೆ.

ಭಾರತದ ಉತ್ಪನ್ನಗಳಿಗೆ ವಿರೋಧ

ಭಾರತೀಯ ಉತ್ಪನ್ನಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಎನ್‌ಪಿ ನಾಯಕ ರುಹುಲ್ ಕಬೀರ್ ರಿಜ್ವಿ ತಮ್ಮ ಕಾಶ್ಮೀರಿ ಶಾಲನ್ನು ರಸ್ತೆಗೆ ಎಸೆದು 'India out' ಅಭಿಯಾನಕ್ಕೆ ಚಾಲನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.