ADVERTISEMENT

ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ ಎಂದ ಇಮ್ರಾನ್‌: ಭದ್ರತೆ ಹೆಚ್ಚಿಸಿದ ಸರ್ಕಾರ

ಪಿಟಿಐ
Published 16 ಮೇ 2022, 11:03 IST
Last Updated 16 ಮೇ 2022, 11:03 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: ತಮ್ಮ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಇತ್ತೀಚೆಗೆ ಹೇಳಿದ್ದು, ಇದೇ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು ಸೋಮವಾರ ಅವರಿಗೆ ಭದ್ರತೆಯನ್ನು ಹೆಚ್ಚಿಸಿದೆ.

ನನ್ನ ಹತ್ಯೆಗೆ ಪಾಕಿಸ್ತಾನ ಮತ್ತು ವಿದೇಶಗಳಲ್ಲಿ ಸಂಚು ರೂಪಿಸಲಾಗುತ್ತಿದೆ ಎಂದು ಖಾನ್ ಶನಿವಾರ ಹೇಳಿಕೊಂಡಿದ್ದರು. ಹಾಗೇನಾದರೂ ನನಗೆ ಆದರೆ, ವಿಡಿಯೊ ಸಂದೇಶವೊಂದು ಜನರಿಗೆ ಅಪರಾಧಿಗಳ ಬಗ್ಗೆ ತಿಳಿಸಲಿದೆ ಎಂದು ಹೇಳಿದ್ದರು.

‘ನನ್ನ ಪ್ರಾಣ ತೆಗೆಯುವ ಸಂಚು ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಈ ಸಂಚಿನ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಸಿಕ್ಕಿತ್ತು. ನನ್ನ ವಿರುದ್ಧ ಪಾಕಿಸ್ತಾನ ಮತ್ತು ವಿದೇಶಗಳಲ್ಲಿ ಸಂಚು ರೂಪಿಸಲಾಗುತ್ತಿದೆ. ಈ ಷಡ್ಯಂತ್ರದ ಬಗ್ಗೆ ನಾನು ವಿಡಿಯೊ ರೆಕಾರ್ಡ್ ಮಾಡಿದ್ದೇನೆ. ಭಾಗಿಯಾದವರೆಲ್ಲರ ಹೆಸರನ್ನು ವಿಡಿಯೊದಲ್ಲಿ ಉಲ್ಲೇಖಿಸಿದ್ದೇನೆ. ನನಗೆ ಏನಾದರೂ ಸಂಭವಿಸಿದರೆ, ಈ ಪಿತೂರಿಯ ಹಿಂದೆ ಯಾರಿದ್ದಾರೆಂಬುದು ಜನರಿಗೆ ವಿಡಿಯೊ ಮೂಲಕ ತಿಳಿಯುತ್ತದೆ’ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನಲ್ಲಿ ನಡೆದ ಸಮಾವೇಶದಲ್ಲಿ ಖಾನ್ ಹೇಳಿದ್ದಾರೆ.

ADVERTISEMENT

ಖಾನ್‌ ಹೇಳಿಕೆಯ ಹಿನ್ನೆಲೆಯಲ್ಲಿ ಪಾಕ್‌ ಪ್ರಧಾನಿ ಶಹಾಬಾಝ್‌ ಷರೀಫ್ ಅವರು ಸೋಮವಾರ ಆಂತರಿಕ ಸಚಿವಾಲಯದ ಅಧಿಕಾರಿಗಳೊಂದಿಗೆ ಎರಡು ಬಾರಿ ನಡೆಸಿದರು. ನಂತರ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಲಾಯಿತು ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಇಮ್ರಾನ್‌ ಖಾನ್‌ ಭದ್ರತೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಅವರು ತೆರಳುವ ಕಡೆ ಸೂಕ್ತ ಭದ್ರತೆ ಒದಗಿಸುವಂತೆ ಪ್ರಧಾನಿ ಶಹಾಬಾಝ್‌ ಅವರು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.