ಗಾಜಾಪಟ್ಟಿಯ ಖಾನ್ ಯುನಿಸ್ನಲ್ಲಿ ಊಟಕ್ಕಾಗಿ ಖಾಲಿ ಪಾತ್ರೆ ಹಿಡಿದು ಗೋಗರೆಯುತ್ತಿರುವ ಮಕ್ಕಳು ಮತ್ತು ಮಹಿಳೆಯರು
ಜರುಸಲೇಂ: ಗಾಜಾದಲ್ಲಿ ಕ್ಷಾಮ ತಲೆದೋರಿದೆ ಎಂದು ವಿಶ್ವಸಂಸ್ಥೆ ಶುಕ್ರವಾರ ಘೋಷಿಸಿದೆ. ಇಸ್ರೇಲ್ ಮಾನವೀಯ ನೆರವು ನೀಡಲು ವ್ಯವಸ್ಥಿತವಾಗಿ ಅಡ್ಡಿ ಮಾಡಿದ್ದೇ ಇಂಥ ಸ್ಥಿತಿಗೆ ಕಾರಣ ಎಂದು ಅದು ಆರೋಪಿಸಿದೆ.
ಯುದ್ಧವನ್ನು ನಿಲ್ಲಿಸುವಂತೆ ಹಮಾಸ್ ಬಂಡುಕೋರರು ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯನ್ನು ಒತ್ತಾಯಿಸಿದ್ದರು. ಅನಿರ್ಬಂಧಿತ ಆಹಾರ, ಔಷಧ, ನೀರು ಮತ್ತು ಇಂಧನ ಪೂರೈಕೆಗೆ ಮನವಿ ಮಾಡಿದ್ದರು.
ಗಾಜಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ಷಾಮ ತಲೆದೋರಿದೆ. ಕದನ ವಿರಾಮ ಘೋಷಣೆಯಾಗದಿದ್ದರೆ ಮತ್ತು ಮಾನವೀಯ ನೆರವು ನೀಡಲು ಇರುವ ನಿರ್ಬಂಧ ಅಂತ್ಯಗೊಳ್ಳದಿದ್ದರೆ ಇತರ ಪ್ರದೇಶಗಳಿಗೂ ಕ್ಷಾಮ ಹಬ್ಬುವ ಸಾಧ್ಯತೆ ಇದೆ ಎಂದು ಆಹಾರ ಬಿಕ್ಕಟ್ಟು ಕುರಿತ ಸಂಸ್ಥೆ ಎಚ್ಚರಿಸಿದೆ.
ಸಮಗ್ರ ಆಹಾರ ಭದ್ರತಾ ವರ್ಗೀಕರಣ (ಐಪಿಸಿ) ಸಂಸ್ಥೆಯು, ಇಸ್ರೇಲ್ನಿಂದ ನಿರಂತರ ಆಕ್ರಮಣ, ಆಹಾರ ಮತ್ತು ಮಾನವೀಯ ನೆರವಿಗೆ ನಿರ್ಬಂಧ, ವ್ಯಾಪಕ ಸ್ಥಳಾಂತರ, ಉತ್ಪಾದನೆಯ ಕುಸಿತವು ಪ್ಯಾಲೆಸ್ಟೀನಿಯನ್ನರನ್ನು ಹಸಿವು, ಬರಗಾಲಕ್ಕೆ ದೂಡಿದೆ ಎಂದು ಹೇಳಿದೆ.
5 ಲಕ್ಷಕ್ಕೂ ಅಧಿಕ ಮಂದಿ ಅತ್ಯಂತ ಹಸಿವಿನಿಂದ ನಲುಗುತ್ತಿದ್ದಾರೆ, ಹಲವರು ಅಪೌಷ್ಟಿಕತೆ ಯಿಂದ ಸಾಯುವ ಹಂತ ತಲುಪಿದ್ದಾರೆ. ಸೆಪ್ಟೆಂಬರ್ ಅಂತ್ಯದ ವೇಳೆ ಈ ಸಂಖ್ಯೆಯು 6.41 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಪಿಸಿ ಹೇಳಿದೆ.
ಹಮಾಸ್ ಬಂಡುಕೋರರು ಇಸ್ರೇಲ್ ಷರತ್ತುಗಳಿಗೆ ಒಪ್ಪದಿದ್ದರೆ ಗಾಜಾ ನಗರವನ್ನೇ ನಾಶ ಮಾಡಬೇಕಾಗುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಟ್ಜ್ ಶುಕ್ರವಾರ ಎಚ್ಚರಿಸಿದ್ದಾರೆ.
ಗಾಜಾ ಸಹ ರಫಾಹ್ ಮತ್ತು ಬೈತ್ ಹನೌನ್ ರೀತಿ ಭಗ್ನಾವಶೇಷವಾಗಲಿದೆ ಎಂದು ಅವರು ಹೇಳಿದ್ದಾರೆ.
ಗಾಜಾ ನಗರವನ್ನು ವಶಕ್ಕೆ ಪಡೆಯಲು ಮಹತ್ವದ ಕಾರ್ಯಾಚರಣೆ ನಡೆಸಲು ಸೇನೆಗೆ ಪರಮಾಧಿಕಾರ ನೀಡಲಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿಕೆ ನೀಡಿದ ಬಳಿಕ ಈ ಎಚ್ಚರಿಕೆ ನೀಡಿದ್ದಾರೆ.
ಗಾಜಾದಲ್ಲಿನ ಕ್ಷಾಮವು ಮಾನವನಿರ್ಮಿತ ದುರಂತ. ನೈತಿಕತೆಯ ಅಧಃಪತನ, ಮಾನವೀಯತೆಯ ವೈಫಲ್ಯ. ಕೂಡಲೇ ಕದನ ವಿರಾಮ ಘೋಷಣೆಯಾಗಲಿಆ್ಯಂಟೊನಿಯೊ ಗುಟೆರಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.