ADVERTISEMENT

ದಾರಿ ತಪ್ಪಿ ಪಾಕ್‌ಗೆ ತೆರಳಿದ್ದ ಗುಜರಾತ್‌ನ ದನಗಾಹಿ 12 ವರ್ಷಗಳ ನಂತರ ಭಾರತಕ್ಕೆ

ಪಿಟಿಐ
Published 23 ಜನವರಿ 2021, 13:48 IST
Last Updated 23 ಜನವರಿ 2021, 13:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್/ಅಮೃತಸರ: 2008ರಲ್ಲಿ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಗುಜರಾತ್‌ನ ಕಛ್ ಜಿಲ್ಲೆಯ ದನಗಾಹಿಯೊಬ್ಬರು ಜೈಲುಶಿಕ್ಷೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಮರಳಿದ್ದಾರೆ.

ಕಛ್ ಜಿಲ್ಲೆಯ ದಿನಾರಾ ಗ್ರಾಮದ ಇಸ್ಮಾಯಿಲ್ ಸಾಮ 2008ರಲ್ಲಿ ದನಗಳನ್ನು ಮೇಯಿಸುವಾಗ ಆಕಸ್ಮಿಕವಾಗಿ ಪಾಕಿಸ್ತಾನ ತಲುಪಿದ್ದರು. ಅಲ್ಲಿನ ಸೇನೆ ಇಸ್ಮಾಯಿಲ್ ಅವರನ್ನು ಭಾರತದ ಗೂಢಚಾರನೆಂದು ಭಾವಿಸಿ ಬಂಧಿಸಿ ಜೈಲಿನಲ್ಲಿರಿಸಿತ್ತು.

‘ದಿನಾರಾ ಗ್ರಾಮ ಪಾಕಿಸ್ತಾನದಿಂದ 60 ಕಿ.ಮೀ ದೂರವಿದ್ದು, 2008ರಲ್ಲಿ ಗಡಿ ಬೇಲಿ ಇಲ್ಲದ ಕಾರಣ ಇಸ್ಮಾಯಿಲ್ ತಪ್ಪಾಗಿ ಪಾಕಿಸ್ತಾನ ತಲುಪಿದ್ದರು. ಈ ಕುರಿತು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಮನವಿ ಸಲ್ಲಿಸಿತ್ತು. ಈ ಪ್ರಕರಣವನ್ನು ಪರಿಶೀಲಿಸಿದ ಇಸ್ಲಾಮಾಬಾದ್ ಹೈಕೋರ್ಟ್ ಇಸ್ಮಾಯಿಲ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಶುಕ್ರವಾರ ವಾಘಾ–ಅಟಾರಿ ಅಂತರರಾಷ್ಟ್ರೀಯ ಗಡಿ ಮೂಲಕ ಇಸ್ಮಾಯಿಲ್ ಭಾರತದ ಅಮೃತಸರಕ್ಕೆ ತಲುಪಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

2008ರಲ್ಲಿ ಇಸ್ಮಾಯಿಲ್ ಪಾಕಿಸ್ತಾನಕ್ಕೆ ತಲುಪಿರುವ ಕುರಿತು ಅವರ ಕುಟುಂಬಕ್ಕೆ ಮಾಹಿತಿ ಇರಲಿಲ್ಲ. ಆದರೆ, 2017ರಲ್ಲಿ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಪಕ್ಕದ ಗ್ರಾಮದ ವ್ಯಕ್ತಿಯೊಬ್ಬ ಇಸ್ಮಾಯಿಲ್ ಪಾಕಿಸ್ತಾನದ ಜೈಲಿನಲ್ಲಿರುವ ಕುರಿತು ಮಾಹಿತಿ ನೀಡಿದ್ದ. ಆಗ ಕುಟುಂಬಕ್ಕೆ ವಿಷಯ ತಿಳಿಯಿತು.

‘ಇಸ್ಮಾಯಿಲ್ ಅವರ ಪ್ರಕರಣದ ಕುರಿತು ಪಾಕಿಸ್ತಾನ–ಭಾರತ ಪೀಪಲ್ಸ್ ಫೋರಂ ಫಾರ್ ಪೀಸ್ ಅಂಡ್ ಡೆಮಾಕ್ರಸಿ ಮತ್ತು ಸ್ಥಳೀಯ ಎನ್‌ಜಿಒವೊಂದು ಭಾರತ ಹಾಗೂ ಪಾಕಿಸ್ತಾನದ ಸರ್ಕಾರಗಳನ್ನು ಸಂಪರ್ಕಿಸಿ, ಅಲ್ಲಿನ ಹೈಕಮಿಷನ್‌ಗೆ ಪತ್ರ ಬರೆದು ಬಿಡುಗಡೆ ಮಾಡುವಂತೆ ಕೋರಿತ್ತು’ ಎಂದು ಪತ್ರಕರ್ತ ಹಾಗೂ ಶಾಂತಿ ಕಾರ್ಯಕರ್ತ ಜತಿನ್ ದೇಸಾಯಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.