ADVERTISEMENT

ಮಾತೃ ವಿಯೋಗ | ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸಂತಾಪ

ನಿಮ್ಮ ಕಷ್ಟದ ಸಮಯದಲ್ಲಿ ನಮ್ಮ ಪ್ರಾರ್ಥನೆ ಇದೆ ಎಂದ ಬೈಡೆನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2022, 5:22 IST
Last Updated 31 ಡಿಸೆಂಬರ್ 2022, 5:22 IST
ಪ್ರಧಾನಿ ಮೋದಿ ಹಆಗೂ ಜೋ ಬೈಡೆನ್‌ (ಏಜೆನ್ಸಿ ಚಿತ್ರ)
ಪ್ರಧಾನಿ ಮೋದಿ ಹಆಗೂ ಜೋ ಬೈಡೆನ್‌ (ಏಜೆನ್ಸಿ ಚಿತ್ರ)   

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಅವರ ನಿಧನಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಸಂತಾಪ ಸೂಚಿಸಿದ್ದಾರೆ.

ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಜೋ ಬೈಡೆನ್‌, ‘ಮಾತೃ ವಿಯೋಗದಿಂದ ದುಃಖಿತರಾಗಿರುವಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್‌ ಹಾಗೂ ನಾನು ಹೃದಯಪೂರ್ವಕ ಸಂತಾಪಗಳನ್ನು ಸೂಚಿಸುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕುಟುಂಬಕ್ಕೆ ನಮ್ಮ ಪ್ರಾರ್ಥನೆ ಇರಲಿದೆ‘ ಎಂದು ಅವರು ಹೇಳಿದ್ದಾರೆ.

ಹೀರಾಬೆನ್‌ (100) ಅವರು ಅನಾರೋಗ್ಯದಿಂದ ಶುಕ್ರವಾರ ನಸುಕಿನ 3.39ಕ್ಕೆ ನಿಧನರಾಗಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಅಹಮದಾಬಾದ್‌ನ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಆ್ಯಂಡ್‌ ರೀಸರ್ಚ್‌ ಸೆಂಟರ್‌ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.

ADVERTISEMENT

ಮೋದಿ ಅವರು ತಾಯಿ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ವೈದ್ಯರು ಆರೋಗ್ಯಸ್ಥಿತಿ ಸುಧಾರಿಸುತ್ತಿರುವುದಾಗಿ ಮಾಹಿತಿ ನೀಡಿದ ನಂತರ ಮೋದಿ ತೆರಳಿದ್ದರು. ಗುರುವಾರವೂ ವೈದ್ಯಕೀಯ ಬುಲೆಟಿನ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದೇ ಹೇಳಲಾಗಿತ್ತು.

ಹೀರಾಬೆನ್‌ ಅವರಿಗೆ ಐವರು ಪುತ್ರರಾದ ನರೇಂದ್ರ ಮೋದಿ, ಸೋಮಭಾಯಿ, ಅಮೃತ್‌ಭಾಯಿ, ಪ್ರಹ್ಲಾದ್‌ಭಾಯಿ, ಪಂಕಜ್‌ಭಾಯಿ ಹಾಗೂ ಪುತ್ರಿ ವಾಸಂತಿಬೆನ್‌ ಇದ್ದಾರೆ.

ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಯ್‌ಸನ್‌ ಗ್ರಾಮಕ್ಕೆ ಆಗಮಿಸಿದ ಮೋದಿ ಅವರು, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸಹೋದರರೊಂದಿಗೆ ಮೋದಿ ಅವರು ಅಂತಿಮ ಯಾತ್ರೆಯಲ್ಲಿ ಹೆಗಲುಕೊಟ್ಟರು. ಬೆಳಿಗ್ಗೆ 9.30ರ ಸುಮಾರಿಗೆ ಗಾಂಧಿ ನಗರದ ಚಿತಾಗಾರದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳು ನಡೆದವು. ಚಿತೆಗೆ ಮೋದಿ ಅಗ್ನಿಸ್ಪರ್ಶ ಮಾಡಿದ್ದರು.

ಅಮ್ಮನಲ್ಲಿ ತ್ರಿಮೂರ್ತಿ ಕಂಡಿದ್ದೆ:

‘ಅದ್ಭುತ ಶತಾಯುಷಿ ದೇವರ ಪದತಳದಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಅವರ ಜೀವನವು ತಪಸ್ವಿಯ ಪಯಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು. ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ’ ಎಂದು ಮೋದಿ ಟ್ವೀಟ್‌ನಲ್ಲಿ ತಾಯಿಗೆ ಅಂತಿಮ ನಮನ ಸಲ್ಲಿಸಿದ್ದರು.

ಮತ್ತೊಂದು ಟ್ವೀಟ್‌ನಲ್ಲಿ ‘ಇದೇ ವರ್ಷದ ಜೂನ್‌ 18ರಂದು ಅವರ (ಅಮ್ಮನ) 100ನೇ ವರ್ಷದ ಜನ್ಮದಿನ ಭೇಟಿಯಾಗಿದ್ದೆ. ಆಗ ಅವರು ಸದಾ ನನ್ನ ನೆನಪಿನಲ್ಲಿ ಉಳಿಯುವಂತಹ ‘ನಿನ್ನ ಬುದ್ಧಿ (ಮಿದುಳು) ಬಳಸಿ ಕೆಲಸ ಮಾಡು. ಪರಿಶುದ್ಧ ಬದುಕು ನಡೆಸು’ ಎನ್ನುವ ಮಾತು ಹೇಳಿದ್ದರು’ ಎಂದು ಸ್ಮರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.