ಕರಾಚಿ: ಜೀವರಕ್ಷಕ ಔಷಧಗಳ ಆಮದು ವಿಚಾರದಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು. ದಾರಿ ತಪ್ಪಿಸುವವರ ಮಾತು ಕೇಳಬಾರದು ಎಂದು ಪಾಕಿಸ್ತಾನ ಔಷಧ ತಯಾರಕರ ಸಂಘದ (ಪಿಪಿಎಂಎ) ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
‘ಭಾರತದಿಂದ ಕೇವಲ ಜೀವಸತ್ವಗಳನ್ನಷ್ಟೇ ತರಿಸಿಕೊಳ್ಳಲಾಗುತ್ತಿದೆ’ ಎಂದು ಕೆಲವರು ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ಇದು ಸತ್ಯಕ್ಕೆ ದೂರವಾದುದು.ಗರ್ಭಿಣಿಯರಿಗೆ ಬೇಕಾದ ಫೋಲಿಕ್ ಆಮ್ಲಹಾಗೂ ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ವಿಟಮಿನ್ ಬಿ1 ಸೇರಿದಂತೆ ಹಲವು ಅತ್ಯವಶ್ಯಕ ಔಷಧಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ಈ ವಿಚಾರ ಅರ್ಥ ಮಾಡಿಕೊಳ್ಳಬೇಕು’ ಎಂದು ಸಂಘದ ಮಾಜಿ ಅಧ್ಯಕ್ಷಜಾಹೀದ್ ಸಯೀದ್ಹೇಳಿದ್ದಾರೆ. ಅವರ ಹೇಳಿಕೆಯು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ‘ಡಾನ್’ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ.
‘ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಲು ಬಳಸುವ ಆ್ಯಂಟಿ ರೇಬೀಸ್ ಲಸಿಕೆ, ಹಾವು ಕಡಿತದ ವೇಳೆ ಜೀವ ಉಳಿಸಲು ಬಳಸುವ ಆ್ಯಂಟಿ ಸ್ನೇಕ್ ಸೆರಂ ಸೇರಿದಂತೆ ಹಲವು ಜೀವರಕ್ಷಕ ಔಷಧಿಗಳನ್ನು ಪಾಕಿಸ್ತಾನದಲ್ಲಿ ಉತ್ಪಾದಿಸಲು ಈವರೆಗೂ ಸಾಧ್ಯವಾಗಿಲ್ಲ.ವ್ಯಾಪಕವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಉತ್ಪಾದನೆಯಾಗುವ ಕೆಲ ಔಷಧಿಗಳಿಗೆ ಕಚ್ಚಾ ವಸ್ತುಗಳೂ ಭಾರತದಿಂದಲೇ ಬರಬೇಕಿದೆ. ಪೂರೈಕೆ ಜಾಲದಲ್ಲಿ ತೊಡಕುಂಟಾದರೆಅಗತ್ಯ ಔಷಧಿಗಳ ಕೊರತೆ ಉಂಟಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.
‘ಪಾಕಿಸ್ತಾನದ ಕೊರೊನಾ ಹಿಡಿತದಿಂದ ಬಿಡಿಸಿಕೊಳ್ಳಲು ಹೋರಾಡುತ್ತಿದೆ. ಈ ಹಂತದಲ್ಲಿಭಾರತದಿಂದ ಔಷಧಿಗಳ ಆಮದು ನಿಲ್ಲಿಸಿದರೆ ಕೋವಿಡ್–19 ಪಿಡುಗು ನಿಯಂತ್ರಿಸುವತಡೆಗಟ್ಟುವ ಸರ್ಕಾರದ ಪ್ರಯತ್ನಗಳಿಗೆ ಅಡ್ಡಿಯಾಗುತ್ತದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.
‘ಭಾರತ–ಪಾಕ್ ನಡುವಿನ ಸಂಬಂಧ ಹದಗೆಟ್ಟ ನಂತರ ಔಷಧ ತಯಾರಕರು ಚೀನಾದಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಪ್ರಯತ್ನಿಸಿದರು. ಆದರೆ, ಚೀನಾದ ಸರಬರಾಜುದಾರರು ಕಚ್ಚಾ ವಸ್ತುಗಳ ಬೆಲೆಯನ್ನು ಅತಿಯಾಗಿ ಹೆಚ್ಚಿಸಿದ್ದರು. ಭಾರತದೊಂದಿಗೆ ನಂಟು ಕಡಿದುಕೊಂಡರೆ ನಮ್ಮ ದೇಶದ ಜನರು ಔಷಧಗಳಿಗಾಗಿ ಹೆಚ್ಚು ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.