ಇಸ್ಲಾಮಾಬಾದ್: ‘ಇಮ್ರಾನ್ ಖಾನ್ ಒಬ್ಬ ‘ಅಸಹಾಯಕ’ ಪ್ರಧಾನಿ. ಪಾಕಿಸ್ತಾನದಲ್ಲಿ ಮಾಧ್ಯಮ ಸಿಬ್ಬಂದಿಗೆ ‘ಭಯದ ವಾತವಾರಣ’ ಹೆಚ್ಚುತ್ತಿದೆ’ ಎಂದು ಪಾಕಿಸ್ತಾನದ ನಿಷೇಧಿತ ಪತ್ರಕರ್ತ ಹಮೀದ್ ಮಿರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನದ ಜಿಯೋ ನ್ಯೂಸ್ ಚಾನೆಲ್ನಲ್ಲಿ ಪ್ರಸಾರವಾಗುವ ಪೊಲಿಟಿಕಲ್ ಟಾಕ್ ಶೋ ‘ಕ್ಯಾಪಿಟಲ್ ಟಾಕ್’ ನಲ್ಲಿ ಹಮೀದ್ ಮಿರ್ ಆ್ಯಂಕರ್ ಆಗಿದ್ದರು. ಮೇ 23ರಂದು ಅವರು, ಪತ್ರಕರ್ತ ಆಸಾದ್ ಆಲಿ ತೂರ್ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಭಾಷಣ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇ 30ರಂದು ಮಾಧ್ಯಮದಿಂದ ಹೊರಗುಳಿಯುವಂತೆ ಅವರ ಮೇಲೆ ನಿಷೇಧ ಹೇರಲಾಯಿತು.
‘ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದೆ. ಆದರೆ ಇಲ್ಲಿ ವಾಸ್ತವಿಕವಾಗಿ ಪ್ರಜಾಪ್ರಭುತ್ವವೇ ಇಲ್ಲ. ಪಾಕಿಸ್ತಾನದಲ್ಲಿ ಸಂವಿಧಾನವಿದ್ದರೂ, ಇಲ್ಲದಂತಿದೆ. ಇಲ್ಲಿನ ಮಾಧ್ಯಮಗಳ ಪರಿಸ್ಥಿತಿ ಬಗ್ಗೆ ನಾನೇ ಜೀವಂತ ಉದಾಹರಣೆ’ ಎಂದು ಇಸ್ಲಾಮಾಬಾದ್ನಿಂದ ಬಿಬಿಸಿ ವರ್ಲ್ಡ್ ಸರ್ವಿಸ್ನ ‘ಹಾರ್ಡ್ಟಾಕ್’ ಶೋಗೆ ನೀಡಿದ ಸಂದರ್ಶನದಲ್ಲಿ ಹಮೀದ್ ಮಿರ್ ಹೇಳಿದ್ದಾರೆ.
ನಿಮ್ಮ ಮೇಲೆ ಹೇರಿರುವ ನಿಷೇಧದ ಹಿಂದೆ ಪ್ರಧಾನಿಯವರ ಕೈವಾಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ ಇಮ್ರಾನ್ ಖಾನ್ ಅವರು ಇದಕ್ಕೆ ನೇರ ಹೊಣೆಯಲ್ಲ. ನನ್ನನ್ನು ಮಾಧ್ಯಮದಿಂದ ಹೊರಹಾಕಬೇಕೆಂದು ಅವರು ಇಚ್ಛಿಸಿದ್ದರು ಎಂಬುದನ್ನು ನಾನು ನಂಬುದಿಲ್ಲ. ಹಿಂದಿನ ಪ್ರಧಾನಿಗಳಂತೆ ಅವರು ಕೂಡ ಶಕ್ತಿಶಾಲಿ ಪ್ರಧಾನಿಯಲ್ಲ. ಅವರು ಅಸಹಾಯಕರು. ಅವರಿಂದ ನನಗೆ ಸಹಾಯ ಮಾಡಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.
ಪತ್ರಕರ್ತರ ಮೇಲೆ ನಡೆದ ದಾಳಿಗಳ ಹಿಂದೆ ಗುಪ್ತಚರ ಇಲಾಖೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ಇದು ಕೇವಲ ದಾಖಲೆಗಳಲ್ಲಿರುವ ಅಂಶಗಳಾಗಿವೆ. ಪತ್ರಕರ್ತರ ಮೇಲಾದ ದಾಳಿಗೆ ರಾಜ್ಯದ ಸಂಸ್ಥೆಗಳು ಮತ್ತು ಗುಪ್ತಚರ ಇಲಾಖೆಗಳನ್ನು ಪದೇ ಪದೇ ದೂಷಿಸಲಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.