ಕೊಲಂಬೊ: ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಶುಕ್ರವಾರ ಇಂಧನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಹಣದುಬ್ಬರ ಪ್ರಮಾಣ ದಿನೇದಿನೇ ತೀವ್ರ ಏರಿಕೆಯಾಗುತ್ತಿದ್ದು, ನಾಗರಿಕರ ಸಂಕಷ್ಟವೂ ಹೆಚ್ಚಾಗಿದೆ.
ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ದಿನೇಶ್ ಗುಣವರ್ಧನೆ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ಇಬ್ಬರ ಸಾವಿನ ಬಗ್ಗೆ ವರದಿಯಾಗಿದೆ.
ಪೂರ್ವ ಶ್ರೀಲಂಕಾದ ಕಿನ್ನಿಯಾದಲ್ಲಿ 59 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ಮೋಟಾರುಸೈಕಲನ್ನು ಇಂಧನ ತುಂಬುವುದಕ್ಕಾಗಿ ಎರಡು ದಿನಗಳಿಂದ ಬಂಕ್ನಲ್ಲಿ ಬಿಟ್ಟಿದ್ದರು. ಇಂದು (ಶುಕ್ರವಾರ) ಇಂಧನ ತುಂಬಿಸಿಕೊಳ್ಳುವುದಕ್ಕೆಂದು ಬಂದು ಸರದಿಯಲ್ಲಿ ನಿಂತಿದ್ದಾಗ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸುದ್ದಿ ತಾಣ ‘ಲಂಕಾ ಫಸ್ಟ್’ ವರದಿ ಮಾಡಿದೆ.
ಮೃತದೇಹವನ್ನು ಕಿನ್ನಿಯಾದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಪಶ್ಚಿಮ ಶ್ರೀಲಂಕಾದ ಮಾಥುಗಮಾದಲ್ಲಿನ ಇಂಧನ ಬಂಕ್ ಒಂದರಲ್ಲಿ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸರದಿ ಸಾಲಿನಲ್ಲಿ ನಿಂತಿದ್ದಾಗ ಕುಸಿದುಬಿದ್ದು ಮೃತಪಟ್ಟಿದ್ದಾರೆ.
10 ದಿನಗಳ ಬಳಿಕ ಬಂಕ್ಗಳಿಗೆ ಇಂಧನ ಪೂರೈಸಲಾಗಿತ್ತು. ಹೀಗಾಗಿ ಜನಸಂದಣಿ ಹೆಚ್ಚಾಗಿತ್ತು. ಪೂರೈಕೆಗೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ವರದಿ ಉಲ್ಲೇಖಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.