ನ್ಯೂಯಾರ್ಕ್: ಭಾರತವು ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಅಮೆರಿಕದ ಕಾರ್ಯನಿರ್ವಾಹಕ ನಿರ್ದೇಶಕ ಧ್ರುವ ಜೈಶಂಕರ್ ನಿರಾಕರಿಸಿದ್ದಾರೆ. ಸಂಘರ್ಷವನ್ನು ಕೊನೆಗೊಳಿಸಲು ಕರೆ ನೀಡುವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಒಬ್ಬರು ಎಂದು ಅವರು ಒತ್ತಿ ಹೇಳಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಜೈಶಂಕರ್, ಭಾರತದ ತೈಲ ಖರೀದಿಯು ರಾಷ್ಟ್ರೀಯ ಇಂಧನ ಭದ್ರತೆಗೆ ಆದ್ಯತೆ ನೀಡುವುದರೊಂದಿಗೆ ಜಾಗತಿಕ ಬೆಲೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಆ ವಿಷಯದಲ್ಲಿ ಭಾರತವು ತುಂಬಾ ಸ್ಪಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ಅಧ್ಯಕ್ಷ ಪುಟಿನ್ ಅವರೊಂದಿಗಿನ ಹಿಂದಿನ ಸಭೆಗಳನ್ನು ಒಳಗೊಂಡಂತೆ, ಸಂಘರ್ಷವನ್ನು ಕೊನೆಗೊಳಿಸಲು ಕರೆ ನೀಡುವಲ್ಲಿ ಪ್ರಧಾನಿ ಮೋದಿ ದೃಢವಾಗಿ ದನಿ ಎತ್ತಿದ್ದಾರೆ. ಜಾಗತಿಕ ತೈಲ ಬೆಲೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡಿದ ರಷ್ಯಾ ಸೇರಿದಂತೆ ವಿವಿಧ ಮೂಲಗಳಿಂದ ತೈಲವನ್ನು ಏಕೆ ಖರೀದಿಸುವುದನ್ನು ಭಾರತ ಮುಂದುವರಿಸಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಭಾರತ ತನ್ನ ಇಂಧನ ಭದ್ರತೆಗೆ ಬದ್ಧವಾಗಿದೆ’ಎಂದು ಅವರು ಹೇಳಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ಮೇಲಿನ ಯುದ್ಧಕ್ಕೆ ಹಣಕಾಸು ಒದಗಿಸುತ್ತಿವ ಎಂದು ಭಾರತ ಮತ್ತು ಚೀನಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಮಾತನಾಡಿದ್ದ ಟ್ರಂಪ್, ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ಮೂಲಕ ಚೀನಾ ಮತ್ತು ಭಾರತ ಯುದ್ಧಕ್ಕೆ ಪ್ರಾಥಮಿಕ ಹಣಕಾಸು ಒದಗಿಸುತ್ತಿವೆ ಎಂದು ಹೇಳಿದ್ದರು.
ಉಕ್ರೇನ್ನಲ್ಲಿನ ಯುದ್ಧ ಸೇರಿದಂತೆ ಪ್ರಾದೇಶಿಕ ಸಂಘರ್ಷಗಳ ಕುರಿತು ವ್ಯಾಪಕ ಜಾಗತಿಕ ಚರ್ಚೆಗಳ ಮಧ್ಯೆ ಭಾರತ ಮತ್ತು ಅಮೆರಿಕ ನಡುವಿನ ಇತ್ತೀಚಿನ ವ್ಯಾಪಾರ-ಸಂಬಂಧಿತ ಉದ್ವಿಗ್ನತೆಗಳ ನಂತರ ಟ್ರಂಪ್ ಅವರ ಹೇಳಿಕೆಗಳು ಬಂದಿವೆ.
ಜುಲೈನಲ್ಲಿ, ಟ್ರಂಪ್ ಆಡಳಿತವು ಭಾರತೀಯ ಸರಕುಗಳ ಮೇಲೆ ಶೇ 25 ರಷ್ಟು ಸುಂಕವನ್ನು ಘೋಷಿಸಿತ್ತು. ಕೆಲವು ದಿನಗಳ ನಂತರ, ರಷ್ಯಾದಿಂದ ತೈಲ ಖರೀದಿಸುತ್ತಿರುವ ಹಿನ್ನೆಲೆ ದಂಡವಾಗಿ ಹೆಚ್ಚುವರಿಯಾಗಿ ಮತ್ತೆ ಶೇ 25 ರಷ್ಟು ಸುಂಕ ಘೋಷಿಸುವ ಮೂಲಕ ಒಟ್ಟು ಸುಂಕವನ್ನು ಶೇ 50ಕ್ಕೆ ಹೆಚ್ಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.