ADVERTISEMENT

ನಿರ್ಬಂಧ, ಸಂಪನ್ಮೂಲದ ಮಿತಿಯಲ್ಲೂ ಭಾರತದಿಂದ ವಿದೇಶಗಳಿಗೆ ಲಸಿಕೆ -ಅಮರನಾಥ್

ವಿಶ್ವಸಂಸ್ಥೆಯ 43ನೇ ಮಾಹಿತಿ ಸಮಿತಿ ಅಧಿವೇಶನದಲ್ಲಿ ಕಾಯಂ ಪ್ರತಿನಿಧಿ ಅಮರನಾಥ್

ಪಿಟಿಐ
Published 29 ಏಪ್ರಿಲ್ 2021, 7:51 IST
Last Updated 29 ಏಪ್ರಿಲ್ 2021, 7:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ಕಠಿಣ ನಿರ್ಬಂಧಗಳು ಮತ್ತು ತನ್ನಲ್ಲಿರುವ ಸೀಮಿತ ಸಂಪನ್ಮೂಲಗಳ ನಡುವೆಯೂ ಭಾರತ 80 ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಯನ್ನು ಪೂರೈಕೆ ಮಾಡುವ ಜತೆಗೆ, ಲಸಿಕೆಯ ಹಂಚಿಕೆ ಮಾತುಕತೆಗೆ ಪ್ರಯತ್ನಿಸಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಪ್ರತಿನಿಧಿ ಎ.ಅಮರ್‌ನಾಥ್‌ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಾಹಿತಿ ಸಮಿತಿಯ 43 ನೇ ಅಧಿವೇಶನದಲ್ಲಿ ಈ ವಿಷಯ ತಿಳಿಸಿದ ಅವರು, ‘ವಿಶ್ವಸಂಸ್ಥೆಯ ಕಾರ್ಯಕ್ರಮಗಳ ಜಾಗತಿಕ ಮಟ್ಟದಲ್ಲಿ ಮಾಹಿತಿ ಹಂಚುವ ವಿಶ್ವಸಂಸ್ಥೆಯ ಜಾಗತಿಕ ಸಂವಹನ ವಿಭಾಗ(ಡಿಜಿಸಿ), ಎಲ್ಲಾ ದೇಶಗಳಿಂದ ಲಸಿಕೆ ಪ್ರಮಾಣವನ್ನು ಮತ್ತಷ್ಟು ಹಂಚಿಕೊಳ್ಳಲು ಸಕ್ರಿಯವಾಗಿ ಪ್ರೋತ್ಸಾಹಿಸಿದೆ‘ ಎಂದು ಅವರು ತಿಳಿಸಿದರು.

‘ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಲಸಿಕೆ ಉತ್ಪಾದಕ ಕಂಪನಿಯ ಪ್ರಯತ್ನಗಳನ್ನು ಬೆಳಕಿಗೆ ತರಬೇಕು. ಲಸಿಕೆ ಅಗತ್ಯವಿರುವವರಿಗೆ ಲಸಿಕೆಗಳು ದೊರೆಯುವಂತೆ ಮಾಡಬೇಕು‘ ಎಂದು ವಿಶ್ವಸಂಸ್ಥೆಯ ಡಿಜಿಸಿ ವಿಭಾಗವನ್ನು ಅವರು ಒತ್ತಾಯಿಸಿದರು.

ADVERTISEMENT

‘ತೀವ್ರ ನಿರ್ಬಂಧಗಳ ಹೊರತಗಾಗಿಯೂ, ತಮ್ಮದೇ ಆದ ಸೀಮಿತ ಸಂಪನ್ಮೂಲಗಳೊಂದಿಗೆ ಭಾರತ ಬೇರೆ ಬೇರೆ ದೇಶಗಳಿಗೆ ಲಸಿಕೆ ಹಂಚಿಕೆ ಮಾಡಿದೆ. 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಜೀವ ರಕ್ಷಕ ಪರಿಕರಗಳು, ಔಷಧಗಳು ಮತ್ತು ಆರೋಗ್ಯ ರಕ್ಷಣಾ ಪರಿಕರಗಳನ್ನು ಒದಗಿಸಿದ್ದೇವೆ. ಆರೋಗ್ಯ ಸುರಕ್ಷತೆಯ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಹಾಕಿದರೆ ಮಾತ್ರ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡಲು ಸಾಧ್ಯ‘ ಎಂದು ಅಮರನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.