ವಾದ್ಲಿಮಿರ್ ಪುಟಿನ್, ರಕ್ಷಣಾ ಖಾತೆಯ ರಾಜ್ಯ ಸಚಿವ ಸಂಜಯ್ ಸೇಠ್
ಮಾಸ್ಕೋ: ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ, ರಷ್ಯಾವು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದೆ. ರಷ್ಯಾದೊಂದಿಗಿನ ರಕ್ಷಣಾ ಒಪ್ಪಂದದ ಪ್ರಕಾರ, ಬಾಕಿಯಿರುವ ಯುದ್ಧ ಸಾಮಗ್ರಿಗಳನ್ನು ಶೀಘ್ರವೇ ಪೂರೈಸುವ ಭರವಸೆ ನೀಡಿದೆ ಎಂದು ರಷ್ಯಾ ಭೇಟಿಯಲ್ಲಿರುವ ರಕ್ಷಣಾ ಖಾತೆಯ ರಾಜ್ಯ ಸಚಿವ ಸಂಜಯ್ ಸೇಠ್ ಅವರು ಶನಿವಾರ ತಿಳಿಸಿದರು.
ಎರಡನೇ ಮಹಾಯುದ್ಧದ ವೇಳೆ, ನಾಜಿ ಜರ್ಮನಿಯ ವಿರುದ್ಧ ಸೋವಿಯತ್ ಒಕ್ಕೂಟವು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಜರುಗುತ್ತಿರುವ 80ನೇ ವರ್ಷದ ವಿಜಯ ದಿವಸ ಸಂಭ್ರಮಾಚರಣೆಗೆ ಭಾರತದ ಪ್ರತಿನಿಧಿಯಾಗಿ ಸಂಜಯ್ ಸೇಠ್ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ಅವರನ್ನು ಭೇಟಿಯಾಗಿರುವ ಸಂಜಯ್ ಸೇಠ್, ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದ ಹಾಗೂ ತಾಂತ್ರಿಕ ಸಹಕಾರಗಳ ಕುರಿತು ಚರ್ಚಿಸಿದ್ದಾರೆ.
ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ರಷ್ಯಾದ ಬೆಂಬಲವಿದ್ದು, ಈಗಿರುವ ಒಪ್ಪಂದದಂತೆ ಭಾರತ ಮತ್ತು ರಷ್ಯಾ ನಡುವೆ ಪರಸ್ಪರ ರಕ್ಷಣಾ ವಲಯದ ಸಹಕಾರವಿರಲಿದೆ ಎಂದು ತಿಳಿಸಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ಭಾರತದ ನಿಲುವಿಗೆ ರಷ್ಯಾ ಸಹಕಾರ ನೀಡುತ್ತಿರುವುದಕ್ಕೆ ಸಂಜಯ್ ಸೇಠ್ ಅವರು ಧನ್ಯವಾದ ತಿಳಿಸಿದರು.
ರಷ್ಯಾದ ಭೇಟಿಯ ವೇಳೆ ಸಂಜಯ್ ಸೇಠ್ ಅವರು ಶುಕ್ರವಾರ ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ರಷ್ಯಾದ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಮೂರು ಬಾರಿ ಸಾಧ್ಯವಾಗಿದ್ದು, ಅವರ ವಿನಮ್ರ ಸ್ವಭಾವದಿಂದ ಆಕರ್ಷಿತನಾಗಿದ್ದೇನೆ. ರಷ್ಯಾದ ಹವಾಮಾನ ತಣ್ಣಗಿದ್ದಷ್ಟೂ, ಭಾರತದ ಜೊತೆಗಿನ ರಷ್ಯಾದ ಸಂಬಂಧ ಬೆಚ್ಚಗಿರುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.