ಲಂಡನ್: ದೆಹಲಿ ಮೂಲದ ಉದ್ಯಮಿ ವಿದ್ಯುತ್ ಮೋಹನ್ ಅವರ ಕೃಷಿತ್ಯಾಜ್ಯ ಮರುಬಳಕೆಯ ಯೋಜನೆಯ ಆವಿಷ್ಕಾರಕ್ಕೆ ಬಿಬಿಸಿಯ ಪ್ರತಿಷ್ಠಿತ ‘ಅರ್ತ್ಶಾಟ್’ ಪ್ರಶಸ್ತಿ ದೊರೆತಿದೆ.
ಭಾನುವಾರ ಲಂಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಟಕಾಚಾರ್’ ಸಂಸ್ಥೆಯ ಅಗ್ಗದ ತಂತ್ರಜ್ಞಾನದ ಆವಿಷ್ಕಾರಕ್ಕೆ ₹ 10.34 ಕೋಟಿ (1 ಮಿಲಿಯನ್ ಪೌಂಡ್) ಮೊತ್ತದ ನಗದು ಬಹುಮಾನವನ್ನು ಬ್ರಿಟನ್ ರಾಜಕುಮಾರ್ ಪ್ರಿನ್ಸ್ ವಿಲಿಯಂ ಘೋಷಿಸಿದರು.
ಕೃಷಿತ್ಯಾಜ್ಯವನ್ನು ಮರುಬಳಸಲು ‘ಟಕಾಚಾರ್’ನ ತಂತ್ರಜ್ಞಾನವು ಉಪಯುಕ್ತವಾಗಿದ್ದು, ಇದರ ಮೂಲಕ ಹೊಗೆಯ ಹೊರಸೂಸುವಿಕೆಯ ಪ್ರಮಾಣವನ್ನು ಶೇ 98ರಷ್ಟು ಕಡಿಮೆ ಮಾಡಬಹುದು. ಅಲ್ಲದೇ ಇದು ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನೂ ಹೊಂದಿದೆ. ಇದರಿಂದ ಪ್ರಸ್ತುತ ಜನಸಂಖ್ಯೆಯ ಜೀವಿತಾವಧಿಯನ್ನು 5 ವರ್ಷಗಳವರೆಗೆ ಹೆಚ್ಚಿಸಬಹುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ತಿಳಿಸಿದೆ.
ಟಕಾಚಾರ್ ತಂತ್ರಜ್ಞಾನ ಬಳಕೆಯಿಂದ ವರ್ಷಕ್ಕೆ 10 ಲಕ್ಷ ಟನ್ ಕಾರ್ಬನ್ ಡೈ ಆಕ್ಸೈಡ್ ಅನ್ನು ಕಡಿಮೆಗೊಳಿಸಬಹುದು. ಇದು ಹವಾಮಾನ ವಿರುದ್ಧದ ಹೋರಾಟದಲ್ಲಿ ಭಾರತದ ರೈತರ ಗೆಲುವು ಎಂದೂ ವಿವರಿಸಲಾಗಿದೆ.
‘ಟಕಾಚಾರ್ ಸಣ್ಣ ಪ್ರಮಾಣದ ಪೋರ್ಟಬಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ತೋಟ ಅಥವಾ ಹೊಲಗಳಲ್ಲಿ ಟ್ರಾಕ್ಟ್ಯರ್ಗಳಿಗೆ ಇದನ್ನು ಜೋಡಿಸಲಾಗುತ್ತದೆ. ಈ ಯಂತ್ರವು ಕೃಷಿ ತ್ಯಾಜ್ಯವನ್ನು ಇಂಧನ ಮತ್ತು ಗೊಬ್ಬರದಂತಹ ಮಾರಾಟ ಮಾಡಬಹುದಾದ ಜೈವಿಕ ಉತ್ಪನ್ನವನ್ನಾಗಿ ಪರಿವರ್ತಿಸುತ್ತದೆ’ಎಂದು ವಿದ್ಯುತ್ ಮೋಹನ್ ತಿಳಿಸಿದ್ದಾರೆ.
ವಿದ್ಯುತ್ ಮೋಹನ್ ಹೊರತಾಗಿ ತಮಿಳುನಾಡಿನ 14 ವರ್ಷದ ಶಾಲಾ ವಿದ್ಯಾರ್ಥಿನಿ ವಿನಿಶಾ ಉಮಾಶಂಕರ್ ಅವರ ಹೆಸರು ಅಂತಿಮ ನಾಮನಿರ್ದೇಶನದಲ್ಲಿತ್ತು. ಅವರ ಸೌರಶಕ್ತಿ ಚಾಲಿತ ಐರನಿಂಗ್ ಕಾರ್ಟ್ ಯೋಜನೆಯು ಸ್ಪರ್ಧೆಯಲ್ಲಿತ್ತು. ಆದರೆ ಅವರಿಗೆ ಪ್ರಶಸ್ತಿ ದೊರೆತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.