ADVERTISEMENT

ಲಂಡನ್‌| ಭಾರತೀಯ ರಾಯಭಾರ ಕಚೇರಿಯ ರಾಷ್ಟ್ರಧ್ವಜ ಕೆಳಗಿಳಿಸಿದ್ದವ ಕ್ಯಾನ್ಸರ್‌ನಿಂದ ಸಾವು

ಐಎಎನ್ಎಸ್
Published 15 ಜೂನ್ 2023, 6:42 IST
Last Updated 15 ಜೂನ್ 2023, 6:42 IST
   

ಲಂಡನ್‌: ಇಲ್ಲಿನ ಭಾರತೀಯ ರಾಯಭಾರ ಕಚೇರಿ ಮೇಲಿ ನಡೆದಿದ್ದ ದಾಳಿಯ ಮಾಸ್ಟರ್‌ಮೈಂಡ್ ಖಾಲಿಸ್ತಾನಿ ಪ್ರತ್ಯೇಕತಾವಾದಿ, ಪಂಜಾಬ್‌ ಮೂಲದ ಅವತಾರ್ ಸಿಂಗ್ ಖಾಂಡಾ ರಕ್ತದ ಕ್ಯಾನ್ಸರ್‌ನಿಂದ ಗುರುವಾರ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

ಪಂಜಾಬ್‌ನ ಮೊಗಾ ಪಟ್ಟಣದ ಅವತಾರ್‌ ಸಿಂಗ್‌ ‘ಖಾಲಿಸ್ತಾನ್ ಲಿಬರೇಶನ್ ಫೋರ್ಸ್’ ಮುಖ್ಯಸ್ಥನಾಗಿದ್ದ. ಬ್ರಿಟನ್‌ ಮೂಲದ ಸರ್ಕಾರೇತರ ಸಂಸ್ಥೆ ‘ಖಾಲ್ಸಾ ಏಡ್’ನ ಸಂಸ್ಥಾಪಕ ರವಿ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದು, ಲಂಡನ್‌ನ ಆಸ್ಪತ್ರೆಯಲ್ಲಿ ಅವತಾರ್‌ ಸಿಂಗ್‌ ಖಾಂಡಾ ಕೊನೆಯುಸಿರೆಳೆದಿದ್ದಾಗಿ ಖಚಿತಪಡಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಪ್ರಕಟಿಸಿದೆ.

ಬಾಂಬ್ ತಜ್ಞನಾಗಿದ್ದ ಖಾಂಡಾ, ಬಂಧಿತ ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್‌ನ ಬೆಂಬಲಿಗನಾಗಿದ್ದ.

ADVERTISEMENT

ಅಮೃತಪಾಲ್‌ ಬಂಧನ ಕಾರ್ಯಾಚರಣೆಯನ್ನು ಖಂಡಿಸಿ ಲಂಡನ್‌ನಲ್ಲಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಖಾಂಡಾನನ್ನು ಬ್ರಿಟಿಷ್‌ ಅಧಿಕಾರಿಗಳು ಬಂಧಿಸಿದ್ದರು.

ಹೈಕಮಿಷನ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ಗುರುತು/ ಮಾಹಿತಿ ಕೇಳಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರವಷ್ಟೇ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಸರಣಿ ಫೋಟೊಗಳನ್ನು ಹಂಚಿಕೊಂಡಿತ್ತು. ಎನ್‌ಐಎ ಬಿಡುಗಡೆ ಮಾಡಿದ್ದ ಚಿತ್ರದಲ್ಲಿ ಖಾಂಡಾ ಕೂಡ ಸೇರಿದ್ದ.

‘ಅಧಿಕಾರಿಗಳಿಗೆ ಗಂಭೀರವಾದ ಗಾಯಗಳನ್ನು ಉಂಟುಮಾಡಿದ, ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪವನ್ನು ಎನ್ಐಎ ಆತನ ಮೇಲೆ ಹೊರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.