ಮೆಲ್ಬೋರ್ನ್: 33 ವರ್ಷದ ಭಾರತ ಮೂಲದ ವ್ಯಕ್ತಿ ಸೌರಭ್ ಆನಂದ್ ಮೇಲೆ ಬಾಲಕನೂ ಇದ್ದ ತರುಣರ ಗುಂಪೊಂದು ಮಚ್ಚಿನಿಂದ ಹಲ್ಲೆ ನಡೆಸಿದೆ. ಇದರಿಂದ ಅವರ ಕೈ ಮುರಿದುಹೋಗಿತ್ತು.
‘ಮೆರ್ಲರ್ನ್ನ ಅಲ್ಟೊನಾ ಮೆಡೊಸ್ನಲ್ಲಿರುವ ಸೆಂಟ್ರಲ್ ಸ್ಕ್ವೇರ್ ಶಾಪಿಂಗ್ ಸೆಂಟರ್ನಲ್ಲಿ ಜುಲೈ 19ರಂದು ಔಷಧ ಖರೀದಿಸಿ ಮನೆಗೆ ಹಿಂತಿರುಗಿ ಬರುತ್ತಿದ್ದ ಸೌರಭ್ ಮೇಲೆ ಹಲ್ಲೆ ನಡೆಯಿತು. ಅವರನ್ನು ನೆಲಕ್ಕೆ ತಳ್ಳಿ, ಮೊಬೈಲ್ ಸೇರಿದಂತೆ ಬೆಳೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ’ ಎಂಬ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ತಕ್ಷಣವೇ ಅವರು ನೆರವಿಗಾಗಿ ಕಿರುಚಾಡಿದ್ದಾರೆ. ಅಲ್ಲಿಂದ ದಾರಿಹೋಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿರುವ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಕೈಯನ್ನು ಮರು ಜೋಡಿಸಿ ಚಿಕಿತ್ಸೆ ಮುಂದುವರಿಸಿದ್ದಾರೆ.
ಆನಂದ್ ಮೇಲಿನ ದಾಳಿಗೆ ಸಂಬಂಧಿಸಿದಂತೆ 14 ವರ್ಷದ ಬಾಲಕನನ್ನು ಬಂಧಿಸಿ, ಮಕ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಬಂಧಿತರನ್ನು ಆಗಸ್ಟ್ 15ರವರೆಗೆ ಕಸ್ಟಡಿಗೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.