ADVERTISEMENT

ಇಸ್ರೇಲ್‌: ಮುಂಬೈ ದಾಳಿ ಸಂಚುಕೋರರ ವಿರುದ್ಧ ಕ್ರಮಕ್ಕೆ ಭಾರತೀಯರ ಆಗ್ರಹ

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಪಿಟಿಐ
Published 26 ನವೆಂಬರ್ 2021, 8:22 IST
Last Updated 26 ನವೆಂಬರ್ 2021, 8:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈಲಟ್‌, ಇಸ್ರೇಲ್: ಮುಂಬೈ ಮೇಲೆ 13 ವರ್ಷಗಳ ಹಿಂದೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ಭಾರತೀಯರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಭೀಕರ ದಾಳಿಯ ಸೂತ್ರಧಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯರು ಹಾಗೂ ಭಾರತೀಯ ಯಹೂದಿ ಸಮುದಾಯದವರು ಆಗ್ರಹಿಸಿದರು. ಈ ಉಗ್ರರ ದಾಳಿಯಲ್ಲಿ ಇಸ್ರೇಲ್‌ನ ಆರು ಜನರು ಮೃತಪಟ್ಟಿದ್ದರು.

ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು, ಇಲ್ಲಿ ಉದ್ಯೋಗದಲ್ಲಿರುವವರು ಪ್ರತ್ಯೇಕವಾಗಿ ಶ್ರದ್ಧಾಂಜಲಿ ಸಭೆಗಳನ್ನು ಆಯೋಜಿಸಿ, ಗೌರವ ಸಲ್ಲಿಸಿದರು.

ADVERTISEMENT

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ಯಹೂದಿಗಳ ಮುಖಂಡ ಐಸಾಕ್ ಸೊಲೊಮನ್, ‘ಭಾರತ ಮತ್ತು ಇಸ್ರೇಲ್‌ ತಮ್ಮ ನೆರೆ ರಾಷ್ಟ್ರಗಳೊಂದಿಗೆ ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎಂದು ಬಯಸುತ್ತವೆ. ಆದರೆ, ಈ ಎರಡು ರಾಷ್ಟ್ರಗಳು ಭಯೋತ್ಪಾದಕ ಕೃತ್ಯಗಳಿಂದ ಸಂತ್ರಸ್ತವಾಗಿವೆ’ ಎಂದರು.

‘ಜನರಿಗೆ ತೊಂದರೆ ನೀಡಬೇಕು ಎಂಬುದೇ ಭಯೋತ್ಪಾದಕರ ಏಕೈಕ ಗುರಿಯಾಗಿರುತ್ತದೆ. ಭಾರತ ಮತ್ತು ಇಸ್ರೇಲ್ ಇಂತಹ ಉಗ್ರವಾದದ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸಲಿವೆ’ ಎಂದೂ ಅವರು ಹೇಳಿದರು. ಈಲಟ್‌ ಮೇಯರ್ ಸ್ಟಾಸ್ ಬಿಲ್ಕಿನ್ ಅವರೂ ಶ್ರದ್ಧಾಂಜಲಿ ಸಲ್ಲಿಸಿದರು.

***

ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಇಸ್ರೇಲ್‌ನಲ್ಲಿ ವಿವಿಧ ಸಮದಾಯಗಳು ಶ್ರದ್ಧಾಂಜಲಿ ಸಲ್ಲಿಸಿವೆ. ಇದು ಈ ದಾಳಿಯಲ್ಲಿ ಸಂತ್ರಸ್ತರಾದವರಿಗೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆಯನ್ನು ಧ್ವನಿಸುತ್ತದೆ

ಸಂಜೀವ್‌ ಸಿಂಗ್ಲಾ, ಇಸ್ರೇಲ್‌ನಲ್ಲಿ ಭಾರತದ ರಾಯಭಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.