ಕೊಲಂಬೊ: ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಅಗತ್ಯವಿರುವ ಎಲ್ಲಾ ನೆರವು ಮುಂದುವರಿಸುವ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭರವಸೆ ನೀಡಿದರು. ಸೋಮವಾರ ಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸ ಅವರನ್ನು ಭೇಟಿ ಮಾಡಿದ ಸಚಿವ ಜೈಶಂಕರ್ ಅವರು, ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ ಲಂಕಾಕ್ಕೆ ಭಾರತವು ನಿರಂತರ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಲಂಕಾ ಸರ್ಕಾರದ ಜತೆ ದ್ವಿಪಕ್ಷೀಯ ಮಾತುಕತೆ ಮತ್ತು ಭಾರತ ಸೇರಿದಂತೆ 7 ದೇಶಗಳ ಸದಸ್ಯತ್ವದ ಬಿಮ್ಸ್ಟೆಕ್ ಶೃಂಗದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಎಸ್. ಜೈಶಂಕರ್ ಅವರು ಲಂಕಾಕ್ಕೆ ಬಂದಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿದ ಜೈಶಂಕರ್ ಅವರು, 'ಲಂಕಾ ಅಧ್ಯಕ್ಷ ಗೊಟಬಯ ಅವರನ್ನು ಭೇಟಿ ಮಾಡಿ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದೇನೆ. ಈ ವೇಳೆ ಲಂಕಾಕ್ಕೆ ನೆರವನ್ನು ಮುಂದುವರಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾಗಿ' ಹೇಳಿದ್ದಾರೆ.
ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿರುವ ಲಂಕಾ ಆರ್ಥಿಕ ಮತ್ತು ಇಂಧನದ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಹೊರಬರುವ ನಿಟ್ಟಿನಲ್ಲಿ ಭಾರತ ಸರ್ಕಾರ ಇತ್ತೀಚೆಗಷ್ಟೇ ಲಂಕಾಕ್ಕೆ ₹7600 ಕೋಟಿ ರೂಪಾಯಿ ನೆರವು ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.