ವಾಷಿಂಗ್ಟನ್: ಕಾಶ್ಮೀರದ ಮಾನವ ಹಕ್ಕುಗಳ ಕಾರ್ಯಕರ್ತ ಸುಶೀಲ್ ಪಂಡಿತ್ ಅವರ ಹತ್ಯೆಗೆ ಸಂಚು ರೂಪಿಸಿರುವುದಕ್ಕೆ ಅಮೆರಿಕದಲ್ಲಿರುವ ಕಾಶ್ಮೀರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸುಶೀಲ್ ಪಂಡಿತ್ ಅವರನ್ನು ಹತ್ಯೆಗೈಯಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
’ಹೈವ್ ಕಮ್ಯೂನಿಕೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ಸುಶೀಲ್ ಪಂಡಿತ್ ಅವರನ್ನು ಹತ್ಯೆಗೈಯಲು ಬಾಡಿಗೆಗೆ ನಿಯೋಜಿಸಿದ್ದ ಇಬ್ಬರನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದರು.
ಕಾಶ್ಮೀರಿ ಪಂಡಿತರ ಜೀವ ಮತ್ತು ಸ್ವಾತಂತ್ರ್ಯ ಇನ್ನೂ ಅಪಾಯದಲ್ಲಿದೆ ಎನ್ನುವುದು ಈ ಪ್ರಕರಣದಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಇಂಡೊ–ಅಮೆರಿಕನ್ ಕಾಶ್ಮೀರ ಫೋರಂ (ಐಎಕೆಎಫ್) ಹೇಳಿದೆ.
ಸುಶೀಲ್ ಪಂಡಿತ್ ಅವರನ್ನು ಹತ್ಯೆಗೈಯಲು ನಿಯೋಜಿಸಿದ್ದ ಇಬ್ಬರನ್ನು ಬಂಧಿಸಿರುವ ದೆಹಲಿ ಪೊಲೀಸರಿಗೆ ಅಭಿನಂದನೆಗಳು. ಜತೆಗೆ, ಇಂತಹ ಕೃತ್ಯ ನಡೆಸಲು ಸಂಚು ರೂಪಿಸಿದವರನ್ನು ಸಹ ಬಂಧಿಸಿ ಸಮಗ್ರ ತನಿಖೆ ಕೈಗೊಳ್ಳಬೇಕು. ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಬೇಕು ಮತ್ತು ಸುಶೀಲ್ ಪಂಡಿತ್ಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.