
ಕೈರೊ: ಇರಾನ್ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಳಿಕ ಕೆಲವರು ಸಂಭ್ರಮಾಚರಿಸಿದ್ದಾರೆ.
ರಸ್ತೆಗಳಲ್ಲಿ ಕೆಲವರು ನೃತ್ಯ ಮಾಡಿದರೆ, ಮತ್ತೆ ಕೆಲವರು ಕಾರುಗಳ ಹಾರ್ನ್ ಮಾಡಿ, ಮನೆಯ ಕಿಟಕಿ ಹಾಗೂ ಚಾವಣಿಗಳಲ್ಲಿ ಕಿರುಚುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಆದರೆ, ಎರಡನೇ ದಿನವಾದ ಭಾನುವಾರವೂ ಅಮೆರಿಕ ಮತ್ತು ಇಸ್ರೇಲ್ನಿಂದ ವೈಮಾನಿಕ ದಾಳಿಗಳು ಮುಂದುವರಿದಿದ್ದರಿಂದ, ಇರಾನ್ನ ಅನೇಕರಲ್ಲಿ ಭಯ, ಆತಂಕ ಮತ್ತು ಅನಿಶ್ಚಿತತೆ ಮೂಡಿದೆ. ಸುಮಾರು ನಾಲ್ಕು ದಶಕಗಳ ಕಾಲ ಇರಾನ್ನ ಅಧಿಕಾರದ ಶಿಖರದಲ್ಲಿ ನಿಂತಿದ್ದ ಖಮೇನಿ ಮತ್ತು ಸೇನೆಯ ಉನ್ನತ ಅಧಿಕಾರಿಗಳ ಸಾವು ಇರಾನಿಯನ್ನರನ್ನು ದಿಗ್ಭ್ರಮೆಗೊಳಿಸಿದೆ.
ಖಮೇನಿ ಅವರ ಸಾವಿನ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಉತ್ತರ ಟೆಹರಾನ್ನ ವ್ಯಕ್ತಿಯೊಬ್ಬರು, ‘ಮನಸ್ಸಿನೊಳಗೆ ನಾವು ಸಂಭ್ರಮ ಪಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
‘ರಕ್ಷಣೆ ಸಿಗುವವರೆಗೆ ಜನರು ಬಹಿರಂಗವಾಗಿ ಸಂಭ್ರಮಿಸುತ್ತಿಲ್ಲ. ಏಕೆಂದರೆ, ಖಮೇನಿ ಬೆಂಬಲಿಗರು ಕ್ರೂರಿಗಳು ಮತ್ತು ಸೇಡು ತೀರಿಸಿಕೊಳ್ಳುವ ಸ್ವಭಾವದವರು’ ಎಂದು ಅವರು ಹೇಳಿದ್ದಾರೆ.
ಖಮೇನಿ ಅವರಿಗೆ ಸಾರ್ವಜನಿಕರ ಬೆಂಬಲ ಇರುವುದನ್ನು ತೋರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಅವರ ಸ್ಮರಣಾರ್ಥ ಅನೇಕ ನಗರಗಳಲ್ಲಿ ಭಾರಿ ಜನಸಮೂಹವನ್ನು ಒಗ್ಗೂಡಿಸುತ್ತಿದ್ದಾರೆ.
ಇರಾನ್ನ ಧ್ವಜಗಳನ್ನು ಬೀಸುತ್ತಾ, ‘ಅಮೆರಿಕಕ್ಕೆ ಸಾವು’ ಎಂದು ಘೋಷಣೆಗಳನ್ನು ಕೂಗುತ್ತಾ, ಇಸ್ಫಹಾನ್ ಮತ್ತು ಯಜ್ದ್ ನಗರಗಳ ಮುಖ್ಯ ಚೌಕಗಳಲ್ಲಿ ಸಾವಿರಾರು ಮಂದಿ ಜಮಾಯಿಸಿರುವ ವಿಡಿಯೊವನ್ನು ಸರ್ಕಾರಿ ಸ್ವಾಮ್ಯದ ವಾಹಿನಿ ಪ್ರಸಾರ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.