ADVERTISEMENT

ಮ್ಯಾನ್ಮಾರ್: ಗಣಿ ಭೂಕುಸಿತ,1 ಸಾವು, 70 ಮಂದಿ ನಾಪತ್ತೆ

ಏಜೆನ್ಸೀಸ್
Published 22 ಡಿಸೆಂಬರ್ 2021, 10:36 IST
Last Updated 22 ಡಿಸೆಂಬರ್ 2021, 10:36 IST
ಭೂಕುಸಿತದ ಬಳಿಕ ನಾಪತ್ತೆ ಆಗಿರುವ 70 ಮಂದಿ ಪತ್ತೆಗೆ ಮ್ಯಾನ್ಮಾರ್‌ನ ಪಕಂತ್‌ನಲ್ಲಿ ಶೋಧ ನಡೆಯುತ್ತಿರುವುದು
ಭೂಕುಸಿತದ ಬಳಿಕ ನಾಪತ್ತೆ ಆಗಿರುವ 70 ಮಂದಿ ಪತ್ತೆಗೆ ಮ್ಯಾನ್ಮಾರ್‌ನ ಪಕಂತ್‌ನಲ್ಲಿ ಶೋಧ ನಡೆಯುತ್ತಿರುವುದು   

ಬ್ಯಾಂಕಾಕ್: ಉತ್ತರ ಮ್ಯಾನ್ಮಾರ್‌ನ ಕಚಿನ್‌ ರಾಜ್ಯದ ಪಕಂತ್‌ನ ಗಣಿಯಲ್ಲಿ ಬುಧವಾರ ಭೂಕುಸಿತವಾಗಿದ್ದು, 70 ಮಂದಿ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಶೋಧಕಾರ್ಯ ನಡೆದಿದೆ.

ಗಯುನಾರ್‌ ರಕ್ಷಣಾ ತಂಡದ ನ್ಯೊ ಚಾ ಅವರು, ‘ಶೋಧ ಕಾರ್ಯ ನಡೆದಿದೆ. ಅಕ್ಕಪಕ್ಕದ ಗಣಿಗಳ ಮಣ್ಣು, ತ್ಯಾಜ್ಯ 60 ಮೀಟರ್‌ನಷ್ಟು ಕುಸಿದಿದೆ. ಐವರು ಮಹಿಳೆಯರು ಮಣ್ಣಿನೊಳಗೆ ಸಿಲುಕಿದ್ದರು. ಒಬ್ಬನ ಶವವನ್ನು ತೆಗೆಯಲಾಗಿದೆ' ಎಂದು ತಿಳಿಸಿದ್ದಾರೆ.

ರಕ್ಷಣಾ ಮತ್ತು ಅಗ್ನಿಶಾಮಕ ಸೇವೆಯ150 ಸಿಬ್ಬಂದಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಬೆಟ್ಟ ಪ್ರದೇಶವಾಗಿರುವ ಇದು ಕಚಿನ್‌ ರಾಜ್ಯದ ದುರ್ಗಮ ಸ್ಥಳವಾಗಿದೆ. ಮ್ಯಾನ್ಮಾರ್‌ನ ದೊಡ್ಡ ನಗರ ಯಾಂಗಾನ್‌ನಿಂದ 950 ಕಿ.ಮೀ. ದೂರದಲ್ಲಿದೆ. ಅಪರೂಪದ, ಮೌಲ್ಯಯುತ ಕಲ್ಲುಗಳ ನಿಕ್ಷೇಪ ಇಲ್ಲಿದೆ.

ADVERTISEMENT

ಪಕಂತ್‌ ಪ್ರದೇಶದಲ್ಲಿರುವ ಗಣಿಯು ದುಬಾರಿ ಮೌಲ್ಯದ ಕಲ್ಲುಗಳ ಗಣಿಗಾರಿಕೆ ನಡೆಯುವ ಅತ್ಯಂತ ದೊಡ್ಡ ಗಣಿ. ಇದು, ಮ್ಯಾನ್ಮಾರ್ ಸೇನೆ ಮತ್ತು ಗೊರಿಲ್ಲಾ ಪಡೆಗಳ ನಡುವೆ ತೀವ್ರ ಘರ್ಷಣೆಯು ನಡೆದಿದ್ದ ಸ್ಥಳವೂ ಹೌದು.

ಸುರಕ್ಷತೆ ಕ್ರಮವಹಿಸಿಲ್ಲ ಎಂದು ಸ್ಥಳೀಯ ಆಡಳಿತವು ಅನೇಕ ಗಣಿಗಳ ಲೈಸೆನ್ಸ್‌ ರದ್ದುಪಡಿಸಿತ್ತು. ಅಸುರಕ್ಷತೆ ನಡುವೆಯೇ ಗಣಿಗಾರಿಕೆ ಮುಂದುವರಿದಿದೆ. ಭೂಕುಸಿತದಿಂದಾಗಿ 2020ರ ಜುಲೈನಲ್ಲಿ 162 ಹಾಗೂ 2015ರ ನವೆಂಬರ್‌ನಲ್ಲಿ 113 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.